ಚಿಕ್ಕಮಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ಜಿಲ್ಲೆಯ ಅರಣ್ಯ ಪೊಲೀಸ್ ಸಂಚಾರಿ ದಳ ಹಲವು ದಿನಗಳಿಂದ ಆನೆ ದಂತ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ನಗರದ ಅಥಿತಿ ಗೃಹವೊಂದರಲ್ಲಿ ಆನೆ ದಂತ ಮಾರಾಟ ಮಾಡುವ ಸಮಯದಲ್ಲಿ ಕಾರ್ಯಾಚರಣೆ ನಡೆಸಿರುವ ಚಿಕ್ಕಮಗಳೂರು ಅರಣ್ಯ ಪೊಲೀಸ್ ಸಂಚಾರಿ ದಳದ ಸಿಬ್ಬಂದಿ, ರಮೇಶ್ ಮತ್ತು ಕಾಟಪ್ಪ ಎಂಬುವವರನ್ನು ವಶಕ್ಕೆ ಪಡೆದಿದ್ದು, ಅವರ ಬಳಿಯಿಂದ ಎರಡು ಆನೆ ದಂತ ಮತ್ತು ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರೂ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ. ಹಲವು ದಿನಗಳಿಂದ ಚಿಕ್ಕಮಗಳೂರು, ಅಜ್ಜಂಪುರ ಆಸು ಪಾಸಿನ ಎರಡು ಜಿಲ್ಲೆಯ ಗಡಿಯಲ್ಲಿ ಆನೆ ದಂತ ಮಾರಾಟ ಮತ್ತು ಕಳ್ಳಸಾಗಣೆ ಬಗ್ಗೆ ಕಳೆದ ಒಂದು ತಿಂಗಳಿಂದ ಮಾಹಿತಿಯನ್ನು ಅರಣ್ಯ ಪೊಲೀಸ್ ಸಂಚಾರಿ ದಳ ಕಲೆ ಹಾಕುತ್ತಿತ್ತು. ಸ್ಥಳೀಯರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಆನೆ ದಂತವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.