ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿ ಗದ್ದೆ ಆಶ್ರಮಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿ ವಿನಯ್ ಗುರೂಜಿ ಆಶೀರ್ವಾದ ಪಡೆದರು.
ಬುಧವಾರ ಮಠಕ್ಕೆ ಭೇಟಿ ನೀಡಿದ್ದ ಸಚಿವರು, ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಹಾಗೂ ಮಳೆಯ ಕುರಿತು ಸ್ವಾಮೀಜಿ ಜೊತೆ ಕೆಲಕಾಲ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಗುರೂಜಿ ಅವರ ಕಡೆಯಿಂದ ಕೆಲವು ಸಲಹೆ, ಸೂಚನೆಗಳನ್ನು ಪಡೆದಿದ್ದಾರೆ.
ಈ ಹಿಂದೆ ಹಲವು ಬಾರಿ ಗೌರಿ ಗದ್ದೆ ಆಶ್ರಮಕ್ಕೆ ಸಚಿವ ಡಿ ಕೆ ಶಿವಕುಮಾರ್ ಅವರು ಭೇಟಿ ನೀಡಿ ವಿನಯ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದರು. ನಿನ್ನೆ ಕೂಡ ಅವರ ಆಶೀರ್ವಾದ ಪಡೆದು ಆಶ್ರಮದ ಆವರಣದಲ್ಲಿರುವ ಸ್ಪಟಿಕ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಸಚಿವ ಡಿಕೆಶಿಗೆ ಸಾಥ್ ನೀಡಿದರು.