ಚಿಕ್ಕಮಗಳೂರು: ದಾರಿಯಲ್ಲಿ ಸಿಕ್ಕ ಪರ್ಸನ್ನು ಸಂಬಂಧಪಟ್ಟ ವ್ಯಕ್ತಿಗೆ ಮುಟ್ಟಿಸುವ ಮೂಲಕ ಶಾಲಾ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಶಿವಪುರ ರಸ್ತೆಯಲ್ಲಿರುವ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿದೆ. ಅದರಲ್ಲಿ 2 ಸಾವಿರಕ್ಕೂ ಅಧಿಕ ಹಣವಿದ್ದು, ಎಟಿಎಂ ಕಾರ್ಡ್ಗಳು ಸೇರಿದಂತೆ ಇನ್ನಿತರೆ ಪ್ರಮುಖ ದಾಖಲೆಗಳು ಇದ್ದವು. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳಾದ ಭರತ್, ಶರತ್, ಚೈತ್ರಾ ಭೂಮಿಕಾ ಆ ಪರ್ಸ್ನ್ನು ಶಾಲೆಯ ಶಿಕ್ಷಕರಾದ ಸುಖೇಶ್ ಅವರಿಗೆ ತಂದು ನೀಡಿದ್ದಾರೆ.
ಕೂಡಲೇ ಶಾಲಾ ಶಿಕ್ಷಕ ಸುಖೇಶ್ ಪರ್ಸ್ ಕಳೆದುಕೊಂಡವರನ್ನು ಪತ್ತೆ ಮಾಡಿ ಶಾಲೆಗೆ ಕರೆಯಿಸಿ ಶಾಲಾ ಮಕ್ಕಳ ಕೈಯಿಂದಲೇ ಪರ್ಸನ್ನು ಆ ವ್ಯಕ್ತಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದು, ಮಕ್ಕಳ ಪ್ರಾಮಾಣಿಕತೆಗೆ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.