ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರತಿಕಾಗೋಷ್ಟಿಯಲ್ಲಿ ಇಂದು ಹಲವಾರು ಮಾಹಿತಿಗಳನ್ನು ಮಾಧ್ಯಮಳಿಗೆ ತಿಳಿಸಿದ್ದಾರೆ.
ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ 6 ಜನ ಅಖಾಡದಲ್ಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುರುಷ ಹಾಗೂ ಮಹಿಳಾ ಒಟ್ಟು ಮತದಾರರು 9,33,613 ಲಕ್ಷ ಇದ್ದು, 1222 ಮತಗಟೆಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ತೆರೆಯಲಾಗಿದೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಎರಡೂ ಜಿಲ್ಲೆಗಳಲ್ಲಿ ಒಟ್ಟು 15,13,231 ಲಕ್ಷ ಮತದಾರರಿದ್ದಾರೆ. ಕುಂದಾಪುರ- 222, ಉಡುಪಿ- 226, ಕಾಪು- 208, ಕಾರ್ಕಳ- 209, ಶೃಂಗೇರಿ - 256, ಮೂಡಿಗೆರೆ - 231, ಚಿಕ್ಕಮಗಳೂರು - 257, ತರೀಕೆರೆ -228 ಸೇರಿದಂತೆ ಒಟ್ಟು 1837 ಮತಗಟೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಇನ್ನು ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 16,51,391 ಲಕ್ಷ ಮತದಾರರಿದ್ದು, ಶ್ರವಣಬೆಳಗೊಳ- 271, ಅರಸೀಕೆರೆ - 276, ಬೇಲೂರು- 273, ಹಾಸನ-273, ಹೊಳೆ ನರಸೀಪುರ - 256, ಅರಕಲಗೂಡು- 287, ಸಕಲೇಶಪುರ - 287, ಕಡೂರು- 250 ಸೇರಿದಂತೆ ಈ ಕ್ಷೇತ್ರದಲ್ಲಿ ಒಟ್ಟು 2173 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿ ಮಾಡಲಾಗಿದ್ದು, ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್, ಪಾಳಿ ಮೇರೆಗೆ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಪ್ರತಿ ಚೆಕ್ಪೋಸ್ಟ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಲೈವ್ ವ್ಯವಸ್ಥೆ ಇರಲಿದೆ. ಮಾದರಿ ನೀತಿ ಸಂಹಿತೆ ಜಾರಿಯಾದಗಿನಿಂದ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ದಿನಾಂಕ 18-03-19 ರಂದೂ 1,49,140 ರೂ. ವಶಪಡಿಸಿಕೊಂಡಿದ್ದು, ಪರಿಶೀಲನಾ ಸಮಿತಿಯ ತೀರ್ಮಾನದಂತೆ ಹಣ ಬಿಡುಗಡೆ ಮಾಡಲಾಗಿದೆ. ದಿನಾಂಕ 18 -03-19 ರಂದು 2,48,190 ರೂ. ಮೌಲ್ಯದ 59 ಸೀರೆಗಳನ್ನು ವಶಪಡಿಸಿಕೊಂಡಿದ್ದು ಅವನ್ನು ವಾಣಿಜ್ಯ ತೆರಿಗೆ ಇಲಾಖೆಯ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ದಿನಾಂಕ 1-04-19 ರಂದು 12 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ 10 ಲಕ್ಷಕ್ಕಿಂತ ಜಾಸ್ತಿಯಿದ್ದ ಕಾರಣ ಪರಿಶೀಲನೆ ನಡೆಸಲಾಗುತ್ತಿದೆ. ಇದೇ ದಿನ 2,48,400 ರೂ. ಮೌಲ್ಯದ 1080 ಜೀನ್ಸ್ ಪ್ಯಾಂಟ್ ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ರು.
ದಿನಾಂಕ 16 -04-19 ರ ಸಂಜೆ 6 ಗಂಟೆಯಿಂದ 19 -04-19 ರ ಮಧ್ಯರಾತ್ರಿವರೆಗೂ ಚಿಕ್ಕಮಗಳೂರು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಿತ ಅವಧಿಯಲ್ಲಿ ಯಾವುದೇ ರೀತಿಯ ಬಹಿರಂಗ ಸಭೆ, ಸಾರ್ವಜನಿಕ ಸಭೆ, ಜಾಥಾ, ಮೆರವಣಿಗೆಯನ್ನು ನಡೆಸುವಂತಿಲ್ಲ. ನಿಷೇಧಿತ ಅವಧಿಯಲ್ಲಿ ಐವರಿಗಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ರು.