ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ ರವಿ ಅವರು ಬಿಜೆಪಿ ಪಕ್ಷಕ್ಕೆ ಮತಹಾಕದವರ ವಿರುದ್ದ ನೀಡಿದ್ದ ಹೇಳಿಕೆ ಕುರಿತು ವಿವಿಧ ಪಕ್ಷದ ಮುಖಂಡರು ನೀಡುತ್ತಿರುವ ಪ್ರತಿಕ್ರಿಯೆಗೆ ಚಿಕ್ಕಮಗಳೂರಿನಲ್ಲಿ ಅವರು ತಿರುಗೇಟು ನೀಡಿದ್ದಾರೆ.
ಸೋದರಿ ಸಚಿವೆ ಜಯಮಾಲ ಅವರು ಈ ಕುರಿತು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅವರು ನನಗೆ ಬಜ್ಜೆ ತಿಕ್ಕಬೇಕು ಎಂದು ಹೇಳಿದ್ದಾರೆ. ನಾನು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ಬಜ್ಜೆ ತಿಕ್ಕಿಸಬೇಕಾಗಿರುವುದು ಅವರ ನಾಯಕ ರಾಹುಲ್ ಗಾಂಧಿ ಅವರಿಗೆ, ವಿಶ್ವೇಶ್ವರಯ್ಯ,ಕನಕದಾಸ,ಬಸವಣ್ಣ ಅವರ ಹೆಸರು ಹೇಳಲಿಕ್ಕೇ ಬರಲಿಲ್ಲ. ಸಂಸ್ಕಾರ ನನಗೆ ಮನೆಯಲ್ಲಿಯೂ ಸಿಕ್ಕಿದೆ. ಸಂಘದಲ್ಲಿಯೂ ಸಂಸ್ಕಾರ ಸಿಕ್ಕಿದೆ ಎಂದರು.
ನಾನು ಆ ಮಾತು ಹೇಳಿರೋದು ಚುನಾವಣಾ ನೀತಿ ಸಂಹಿತೆ ಬರುವುದಕ್ಕಿಂತ ಮುಂಚೆ, ಉಪಕಾರ ತೆಗೆದುಕೊಂಡು ಮೋಸ ಮಾಡೋದು, ಇಲ್ಲಿದ್ದು ಪಾಕಿಸ್ತಾನದ ಪರವಾಗಿ ಮಾತನಾಡೋದು ಇಂತವರಿಗೆ ಏನು ಹೇಳುತ್ತಾರೆ ಎಂದು ಜನರಿಗೆ ಕೇಳಿದ್ದೆ. ಆಗ ಅಲ್ಲಿನ ಜನ 'ಪ್ರಧಾನಿ ಮೋದಿಗೆ ಮತಹಾಕದವರು ತಾಯಿ ಗಂಡ್ರು' ಮಾತನ್ನು ಹೇಳಿದ್ದು, ಅದು ನಾನು ಹೇಳಿದ ಮಾತಲ್ಲ. ಈ ಮಾತು ಅನ್ವಯ ಆಗೋದು ಆ ಕೆಲಸ ಮಾಡೋರಿಗೆ ಮಾತ್ರ. ನನ್ನ ವಿರುದ್ದ ಮಾತನಾಡುತ್ತಿರೋರೆಲ್ಲ ಆ ಕೆಲಸ ಮಾಡಿರೋರೇ ಇರಬೇಕು ಅದಕ್ಕೆ ಮಾತನಾಡುತ್ತಿದ್ದಾರೆ ಎಂದರು
ಹಾಸನದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಇದೆ. ಅತಿ ಆಸೆ ಮತ್ತು ದುರಾಸೆಗೆ ಜನರು ಅಂಕುಶ ಹಾಕುತ್ತಾರೆ. ರಾಜ್ಯದಲ್ಲಿ ಇವತ್ತಿನ ವಾತಾವರಣದಲ್ಲಿ ಎಲ್ಲ ಗೆದ್ದರೂ ಆಶ್ಚರ್ಯಪಡಬೇಡಿ. ಆದರೆ, ಕನಿಷ್ಠ 23 ಸ್ಥಾನ ಗೆಲ್ಲುತ್ತೇವೆ. ವಾತವರಣವೇ ಹಾಗೇ ಇದೆ. ಹತ್ತು ಜನರಲ್ಲಿ ಎಂಟು ಜನ ಒಂದು ಕಡೆ ಮಾತನಾಡುತ್ತಾರೆ ಎಂದರೇ ಅದು ಟ್ರೆಂಡ್. ಜಾತಿ ಮೀರಿ, ಹಣ ಮೀರಿ, ಕುಟುಂಬ ವ್ಯಾಮೋಹ ಮೀರಿ ದೇಶಕ್ಕಾಗಿ ಜನ ವೋಟ್ ಹಾಕುತ್ತಾರೆ. ಮೋದಿ ಬಿಟ್ಟು ಪರ್ಯಾಯ ಇಲ್ಲ. ಅತಿ ಕಡಿಮೆ ಸೀಟ್ನಲ್ಲಿ ಕಾಂಗ್ರೆಸ್ ಸ್ವರ್ಧೆ ಮಾಡಿದೆ. ಕೇರಳದಲ್ಲಿ,ಆಂಧ್ರದಲ್ಲಿ ಮಹಾಘಟಬಂಧನ್ ಇಲ್ಲ. ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರ ಹೋಲಿಕೆ ಅಪ್ರಸ್ತುತ ಎಂದರು.