ಚಿಕ್ಕಬಳ್ಳಾಪುರ: ಗುಜರಾತ್ ಮೂಲದ ಮಹಿಳೆಯೊಬ್ಬರು ಅಸ್ತಮಾ ಕಾಯಿಲೆಯಿಂದ ಮೃತಪಟ್ಟು ಎರಡು ದಿನಗಳಾದರೂ, ಶವ ದಹನಕ್ಕೆ ಶಾಂತಿಧಾಮ ಗೇಟ್ ಮುಂಭಾಗ ಶವವನ್ನು ಇಟ್ಟರೂ, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿರುವ ಘಟನೆ ಗೌರಿಬಿದನೂರು ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಲೀಲಾ ಎಂಬ ಮಹಿಳೆ (42) ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಮರಳಿದ್ದರು. ಆದರೆ, ಬುಧವಾರ ಬೆಳಗ್ಗೆ 11 ಗಂಟೆ ವೇಳೆಗೆ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಮೃತಪಟ್ಟಿದ್ದರು. ತಾಯಿ ಲೀಲಾ ಮೃತಪಟ್ಟಿದ್ದರಿಂದ ಒಬ್ಬಳು ಹೆಣ್ಣುಮಗಳು ಹಾಗೂ ಇಬ್ಬರು ಗಂಡು ಮಕ್ಕಳ ಬದುಕು ಈಗ ಬೀದಿಗೆ ಬಂದಿದೆ. ಗುಜರಾತ್ ಮೂಲದ ಅಲೆಮಾರಿ ಜನಾಂಗದ ಕುಟುಂಬಗಳು ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಆರ್ಎಂಸಿ ಬಳಿ ಸುಮಾರು ಐದು ವರ್ಷಗಳಿಂದ ವಾಸಿಸುತ್ತಿವೆ. ಗಾಜಿನ ಆಟಿಕೆ ತಯಾರಿಸಿ ಜೀವನ ಸಾಗಿಸುತ್ತಿದ್ದಾರೆ.
ಲೀಲಾ ಮೃತರಾಗಿದ್ದರಿಂದ ಕುಟುಂಬದವರು ಸಂಪ್ರದಾಯದಂತೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ತೊಂಡೆಬಾವಿ ಹೋಬಳಿಯ ಆರ್ಎಂಸಿ ಗ್ರಾಮದಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ, ಗ್ರಾಮದಲ್ಲಿ ಶವದಹನ ಕಾರ್ಯ ಕೆಲ ಗಂಟೆಗಳಾದರೂ ಅಂತ್ಯಕ್ರಿಯೆ ಮಾಡಿರಲಿಲ್ಲ. ಬದಲಿಗೆ ಪೊಲೀಸರಿಗೆ ಮಾಹಿತಿ ನೀಡಿ, ಗೌರಿಬಿದನೂರು ಚಿತಾಗಾರ ಶಾಂತಿಧಾಮದಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಗ್ರಾಮಸ್ಥರು ಸೂಚಿಸಿದ್ದರು.
ಗ್ರಾಮಸ್ಥರ ಮಾಹಿತಿಯಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕುಟುಂಬದವರು, ಪೊಲೀಸರಿಗೆ ವಿಚಾರ ತಿಳಿಸಿದ್ದರು. ಪೊಲೀಸರು ಸಹಜ ಮರಣಕ್ಕೆ ಆಸ್ಪತ್ರೆಯಿಂದ ದಾಖಲಾತಿ ಇದೆ. ನೀವು ಗೌರಿಬಿದನೂರಿನ ಶಾಂತಿಧಾಮಕ್ಕೆ ಹೋಗಿ ಎಂದು ಸೂಚಿಸಿದ್ದರು. ಹೀಗಾಗಿ ಶವವನ್ನು ತೆಗೆದುಕೊಂಡು ಗೌರಿಬಿದನೂರು ನಗರದ ಉಪ್ಪಾರ ಕಾಲೋನಿ ಬಳಿ ಇರುವ ಮುಕ್ತಿಧಾಮ ಕೇಂದ್ರಕ್ಕೆ ತಂದಿದ್ದರು. ಆದರೆ, ಸ್ಥಳೀಯ ದಾಖಲೆ ಇದ್ದಲ್ಲಿ ಮಾತ್ರ ಶಾಂತಿಧಾಮದಲ್ಲಿ ಶವ ಸಂಸ್ಕಾರ ಮಾಡಲಾಗುವುದು ಎಂದು ಅಲ್ಲಿನ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟು ನಿರ್ಲಕ್ಷಿಸಿದ್ದಾರೆ.
ಈ ವೇಳೆ ಲೀಲಾ ಅವರ ಸಂಬಂಧಿಕರು (ಶಾಂತಿಧಾಮದ) ಮುಕ್ತಿಧಾಮದ ಮುಂದೆ ಶವವನ್ನು ಇಟ್ಟು ಕುಳಿತಿದ್ದನ್ನು ಗೌರಿಬಿದನೂರಿನ ಪತ್ರಕರ್ತ ಲೋಕೇಶ್ ಎನ್ನುವವರು ನೋಡಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಹಾಗೂ ನಗರ ಠಾಣೆಯ ಪೊಲೀಸರು, ಗಸ್ತು ವಾಹನದ ಪೊಲೀಸರು ಭೇಟಿ ನೀಡಿ ಪೂರ್ನ ವಿವರಗಳನ್ನು ನಮೂದಿಸಿ ಶಾಂತಿಧಾಮದ ಆಡಳಿತ ಮಂಡಳಿಗೆ ಸಂಬಂಧಪಟ್ಟ ಮಾಹಿತಿ ನೀಡುವ ಮೂಲಕ ಮುಂದಿನ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
''ಅಸ್ತಮಾ ರೋಗದಿಂದ ಮಹಿಳೆ ಮೃತಪಟ್ಟು ಎರಡು ದಿನ ಆಗಿತ್ತು. ಸುತ್ತಲಿನ ಎಲ್ಲ ಜನರು ಸೇರಿಕೊಂಡು ಶವಸಂಸ್ಕಾರಕ್ಕೆ ಗೌರಿಬಿದನೂರು ಶಾಂತಿಧಾಮಕ್ಕೆ ತಂದಿದ್ದೆವು. ಆದರೆ ಶಾಂತಿಧಾಮದ ಸಿಬ್ಬಂದಿ ಒಪ್ಪಿಗೆ ಕೊಡಲಿಲ್ಲ. ಕೊನೆಗೆ ಸ್ಥಳೀಯರು ತಹಶೀಲ್ದಾರ್ಗೆ ಮಾಹಿತಿ ನೀಡಿದ್ದರು. ತಕ್ಷಣ ತಹಶೀಲ್ದಾರ್ ಸಾಹೇಬರು ಹಾಗೂ ಪೊಲೀಸರು ಬಂದು ಶಾಂತಿಧಾಮಕ್ಕೆ ಬಂದು ಮಹಿಳೆಯ ಶವ ಸಂಸ್ಥಾರಕ್ಕೆ ಅನುಕೂಲ ಮಾಡಿಕೊಟ್ಟರು'' ಎಂದು ಮೃತ ಮಹಿಳೆಯ ಸಂಬಂಧಿ ತಿಳಿಸಿದ್ದಾರೆ.
ಸದ್ಯ ಘಟನೆ ಸಂಬಂಧ ತಾಲೂಕಿನ ದಂಡಾಧಿಕಾರಿ ಹಾಗೂ ಬಿಆರ್ಎಸ್ ಶ್ರೀನಿವಾಸ ಮೂರ್ತಿಯವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್ ಬಂಕ್ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ