ಚಿಕ್ಕಬಳ್ಳಾಪುರ: ನಿರ್ಮಾಣವಾಗಿರುವ ಮೊಬೈಲ್ ಟವರ್ನ್ನು ತೆರವುಗೊಳಿಸದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯಲ್ಲಿ ನಡೆದಿದೆ.
ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಅವರ ಸಂಬಂಧಿ ಬೈರಾರೆಡ್ಡಿ ದೌರ್ಜನ್ಯ ಮಾಡಿ ದಲಿತ ಕಾಲೋನಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ದಲಿತರು ಆರೋಪಿಸಿದ್ದಾರೆ.
ಇನ್ನು ನಿರ್ಮಾಣವಾಗಿರುವ ಟವರ್ ಕಾರ್ಯಾರಂಭ ಮಾಡಿದ್ರೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ಟವರ್ಗೆ ಅಳವಡಿಸಿದ ಜನರರೇಟರ್ ಶಬ್ದದಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಲಿದೆ. ಇದರಿಂದ ನಿತ್ಯ ಕಿರುಕುಳ ಉಂಟಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ, ಹೈವೋಲ್ಟೇಜ್ ವಿದ್ಯುತ್ ಶಾಕ್ನಿಂದ ಅಕ್ಕಪಕ್ಕದ ಕುಟುಂಬಗಳಿಗೆ ಪ್ರಾಣ ಭಯವಿದೆ. ಆದಷ್ಟು ಬೇಗ ಟವರ್ ತೆರವಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ ಇಲ್ಲಿನ ಜನ.
ಈವರೆಗೂ ಸಾಕಷ್ಟು ಬಾರಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ರೂ ಯಾವುದೇ ಪ್ರಯೋಜನವಾಗದ ಕಾರಣ ದಲಿತ ಕೇರಿಯ ನಿವಾಸಿಗಳು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ, ಟವರ್ ಏರಿ ಪ್ರತಿಭಟನೆಗೆ ಮುಂದಾಗಿದ್ದವರನ್ನು ಪೊಲೀಸರು ಸಮಾಧಾನಪಡಿಸಿ ಕೆಳಗಿಳಿಸಿದ್ದಾರೆ.