ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ನಗರದ ಶ್ರೀಭೋಗನಂದೀಶ್ವರನ ದೇವಸ್ಥಾನದ ನಂದೀಶ್ವರ ರಥೋತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದೆ.
ನಿನ್ನೆ ಮುಂಜಾನೆ 5-30ರಿಂದಲೇ ವಿಶೇಷ ಕ್ಷೀರಾಭಿಷೇಕ, ಗಂಧಾಭಿಷೇಕ, ಪುಷ್ಪಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನ ದೇವರಿಗೆ ಸಮರ್ಪಿಸಲಾಯಿತು. ಅಭಿಷೇಕದ ನಂತರ ದೇವರಿಗೆ ಆಲಂಕಾರ ಮಾಡಿ ವಿಶೇಷವಾಗಿ ಪೂಜಾ ಕಾರ್ಯಗಳನ್ನ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ಸಾಲುಗಟ್ಟಿ ಭೋಗನಂದೀಶ್ವರನ ದರ್ಶನ ಪಡೆದರು.
ನಿನ್ನೆ ರಾತ್ರಿ ಗಿರಿಜಾಂಬ ಹಾಗೂ ಶ್ರೀಭೋಗನಂದೀಶ್ವರ ಕಲ್ಯಾಣೋತ್ಸವ ನಡೆದು, ಜಾಗರಣೆ ಪ್ರಯುಕ್ತ ನಂದಿ ಸುತ್ತಮುತ್ತಲ ಹಳ್ಳಿಗಳ ಕಲಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಸೇರಿದಂತೆ ಹರನಾಮ ಸ್ಮರಣೆ ನಡೆಸಲಾಯಿತು.
ಜಿಲ್ಲೆಯಲ್ಲಿ ಸಾವಿರಾರು ಪುರಾತನ ದೇವಸ್ಥಾನಗಳಲ್ಲಿ ನಂದಿ ಗ್ರಾಮದ ಭೋಗ ನಂದಿಶ್ವರ ದೇವಸ್ಥಾನ ಪ್ರಮುಖವಾದದ್ದು. ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯಕ್ಕೆ ಸುತ್ತಲಿನ ಜಿಲ್ಲೆಗಳಿಂದ ಅಲ್ಲದೇ ಹೊರ ರಾಜ್ಯದ ಹಲವೆಡೆಯಿಂದ ಭಕ್ತರು ಬಂದು ಭೋಗನಂದೀಶ್ವರನ ದರ್ಶನ ಪಡೆದುಕೊಳ್ಳುತ್ತಾರೆ.
ಮೂರು ದಿನಗಳ ಕಾಲ ನಡೆಯುವ ಪೂಜೆಗಳಲ್ಲಿ ಇಂದು ನಡೆಯುವ ರಥೋತ್ಸವ ಬಹಳ ಮುಖ್ಯವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.