ಚಿಕ್ಕಬಳ್ಳಾಪುರ : ಸಮ್ಮಿಶ್ರ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಸಚಿವ ಸ್ಥಾನದ ಬಗ್ಗೆ ಸಾಕಷ್ಟು ಮಾತುಕತೆಗಳೇ ಕೇಳಿ ಬರುತ್ತಿದ್ದು, ಚಿಕ್ಕಬಳ್ಳಾಪುರದ ಅನರ್ಹ ಶಾಸಕರಾಗಿದ್ದ ನೂತನ ಬಿಜೆಪಿ ಶಾಸಕ ಸುಧಾಕರ್ ಸಚಿವರಾಗುವ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ.
ಗೌರಿಬಿದನೂರಿನ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ಯಾವ ರೀತಿ ಮಾಡುತ್ತಿದ್ದೇನೋ, ಅದೇ ರೀತಿ ಗೌರಿಬಿದನೂರು ಕ್ಷೇತ್ರದ ಜನತೆ, ರೈತರನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಈ ಮೂಲಕ ತಾನು ಸಚಿವ ಸಂಪುಟದಲ್ಲಿ ಸಚಿವರಾಗುವ ಬಗ್ಗೆ ಪರೋಕ್ಷವಾಗಿ ಹೇಳಿದರು.
ಅವೇಶದಿಂದ, ಹೃದಯದಿಂದ ಮಾತನಾಡುವ ರವಿ ನಾರಾಯಣ ರೆಡ್ಡಿಯವರನ್ನು ನಂಬಬಹುದು. ಆದರೆ ಕೆಲವರು ನಾಜೂಕ್ಕಾಗಿ ಮಾತನಾಡುತ್ತಾರೆ. ಕೊಳಕ್ಕಾಗಿ ಆಲೋಚನೆ ಮಾಡ್ತಾರೆ. ಅತಂಹವರನ್ನು ನಂಬಬೇಡಿ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರನ್ನ ಆಯ್ಕೆ ಮಾಡಿಕೊಳ್ಳಿ ಎಂದು ಗೌರಿಬಿದನೂರಿನ ಮತದಾರರಿಗೆ ಸಲಹೆ ನೀಡಿ ಗೌರಿಬಿದನೂರಿನ ಕ್ಷೇತ್ರದ ಶಾಸಕ ಶಿವಶಂಕರೆಡ್ಡಿಗೆ ಟಾಂಗ್ ನೀಡಿದರು.
ಇನ್ನೂ ಮುಂಬರುವ ದಿನಗಳಲ್ಲಿ ಗೌರಿಬಿದನೂರಿನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರವಿನಾರಾಯಣ ರೆಡ್ಡಿ ನಿಲ್ಲುವುದಾಗಿ ಸ್ಪಷ್ಟಪಡಿಸಿದರು.