ಚಿಕ್ಕಬಳ್ಳಾಪುರ: ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ವರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಯುವಕನನ್ನು ದೇವನಹಳ್ಳಿ ತಾಲೂಕಿನ ಸೋಮತನಹಳ್ಳಿ ಗ್ರಾಮದ ಹನುಮಂತೇಗೌಡ(29) ಎಂದು ಗುರುತಿಸಲಾಗಿದೆ. ಮೂರು ದಿನಗಳಷ್ಟೇ ಬಾಕಿ ಇದ್ದ ಮದುವೆಗೆ ತನ್ನ ಸ್ನೇಹಿತ ಕಿಶೋರ್ ಜೊತೆ ಆಮಂತ್ರಣ ಪತ್ರಗಳನ್ನು ಹಂಚಲು ತೆರಳಿದ್ದ. ಈ ವೇಳೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ನಾಗರ್ಜುನ ಕಾಲೇಜು ಬಳಿ ರಾಷ್ಟ್ರಿಯ ಹೆದ್ದಾರಿ ಸೇತುವೆ ಮೇಲೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಹನುಮಂತೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಹಿಂಬದಿ ಸವಾರ ಕಿಶೋರ್ಗೆ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಟಿಪ್ಪರ್ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಂಭ್ರಮದಲ್ಲಿ ಇರಬೇಕಾದ ಎರಡು ಕುಟುಂಬಗಳಲ್ಲಿಯೂ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.