ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಬಳಿ ವಿವಾದಿತ ಭೂಮಿಗಾಗಿ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಒಂದೆಡೆ ಈ ಜಮೀನು ನಮ್ಮದೆಂದು ರೈತರು ನಿಂತಿದ್ರೆ, ಮತ್ತೊಂದು ಕಡೆ ಸರ್ಕಾರದ್ದು ಅಂತಾ ಅಧಿಕಾರಿಗಳು ಪಟ್ಟು ಹಿಡಿದಿದ್ದರು. ಇನ್ನೂ ವರದನಾಯಕನಹಳ್ಳಿ ಬಳಿ ಬ್ರಿಟಿಷರ ಕಾಲದಲ್ಲಿ 900 ಎಕರೆ ಭುಮಿಯನ್ನು ಸರ್ಕಾರಿ ಜಮೀನೆಂದು ಗುರುತಿಸಲಾಗಿತ್ತು. ಅದರಲ್ಲಿ 50 ಎಕರೆ ಜಮೀನಿನಲ್ಲಿ ಅರಣ್ಯ ಅಧಿಕಾರಿಗಳು ಗಿಡಗಳನ್ನು ನೆಡಲು ತೀರ್ಮಾನಿಸಿದ್ದು, ಈ ಪ್ರದೇಶದಲ್ಲಿ ಗುಣಿಗಳನ್ನು ತೋಡಿದ್ದಾರೆ. ಆದರೆ ಇಲ್ಲಿನ ರೈತರು ಕೆಲವು ತಿಂಗಳುಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದು, ಬಿತ್ತನೆ ಸಹ ಮಾಡಿದ್ದರು.
ಇನ್ನೂ ಈ ಕುರಿತು ರೈತರಿಗೆ ಎಚ್ಚರಿಕೆ ನೀಡಿದರೂ ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಲು ನಿರ್ಮಿಸಿರುವ ಗುಂಡಿಗಳನ್ನು ಮುಚ್ಚಿ ವ್ಯವಸಾಯ ಮಾಡಿದ್ದಾರೆ. ಇದರಿಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ತಾಲೂಕಿನ ದಂಡಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಮುಂದಾಗಿದ್ದಾರೆ.
ರೈತ ಸಂಘ ಹಾಗೂ ಹಸಿರು ಸೇನೆಯು ರೈತರು ಬೆಳೆದಿರುವ ಬೆಳೆಯನ್ನು ಕಟಾವು ಮಾಡುವವರೆಗೂ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿತು. ಬಳಿಕ ಅಧಿಕಾರಿಗಳು ಇದಕ್ಕೆ ಅನುಮತಿ ನೀಡಿದ್ದಾರೆ.