ಕೊಳ್ಳೇಗಾಲ: ಕೊರೊನಾ ಮೂರನೇ ಅಲೆ ತಡೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಹಾಗೂ ತಾಲೂಕು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದೇನೆ ಎಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಕೋವಿಡ್ ಸಂಬಂಧ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ - ಕಾಲೇಜು ಪ್ರಾರಂಭಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಸಂಬಂಧಿಸಿದಂತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಸಂಬಂಧ ಚರ್ಚೆ:
ಕೋವಿಡ್ಗೆ ಸಂಬಂಧಿಸಿದಂತೆ ವ್ಯಾಕ್ಸಿನೇಷನ್, ಕೋವಿಡ್ ಟೆಸ್ಟ್, ಪಾಸಿಟಿವಿಟಿ ರೇಟ್, ಕೊರೊನಾ ಪ್ರಕರಣಗಳು ಸೇರಿದಂತೆ ಗುಣಮುಖಗೊಂಡವರ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ ಎಂದರು.
ಕೊರೊನಾ ತಡೆಗೆ ಸಿದ್ಧತೆ : ಇನ್ನೂ ಕೊರೊನಾ 3ನೆ ಅಲೆ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವ ಉದ್ದೇಶದಿಂದ ಆಯಾ ತಾಲೂಕಿನ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ಯಾವುದೇ ಸಮಸ್ಯೆ ಎದುರಾಗದಂತೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.
ಶಾಲಾ ಆರಂಭಕ್ಕೂ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ 18 ಮೇಲ್ಪಟ್ಟರಿಗೆ ವ್ಯಾಕ್ಸಿನೇಷನ್ ನೀಡುವಂತೆ ತಿಳಿಸಿದ್ದೇನೆ. ಇನ್ನೂ ಚಾಮರಾಜನಗರ ಗಡಿ ಜಿಲ್ಲೆಯಾಗಿರುವ ಕಾರಣ ಸರ್ಕಾರದ ಜೊತೆ ಮತ್ತಷ್ಟೂ ಚರ್ಚಿಸುತ್ತೇನೆ ಎಂದು ಹೇಳಿದರು.
ಸಿಎಂ ರಿಂದ ಖಡಕ್ ಸೂಚನೆ:
ಮೇಕೆದಾಟು ಯೋಜನೆ ಯಾವಾಗ ಕಾರ್ಯರಂಭಗೊಳ್ಳುತ್ತೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಖಡಕ್ ಆಗಿ ಹೇಳಿದ್ದಾರೆ. ಯಾರೇ ಸತ್ಯಾಗ್ರಹ ಮಾಡಲಿ, ಉಪವಾಸ ಕೂರಲಿ ಡೋಂಟ್ಕೇರ್ ಎಂದಿದ್ದಾರೆ. ಇದೀಗ ತಾನೇ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನೊಮ್ಮೆ ದೆಹಲಿಗೆ ತೆರಳಿ ಮೇಕೆದಾಟು ಯೋಜನೆ ಸಂಬಂಧಪಟ್ಟಂತೆ ಮಾತುಕತೆ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.