ಚಾಮರಾಜನಗರ: ಕಳೆದ 18 ತಿಂಗಳಿನಿಂದ ಚಾಮರಾಜನಗರ ಜಿಲ್ಲೆಯ 152 ಮಂದಿ ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ. ಜೊತೆಗೆ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸೇರಿದಂತೆ ಗ್ರಾಮೀಣ ಭಾಗದ ಪೌರ ಕಾರ್ಮಿಕರಿಗೆ ನಿವೇಶನ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಆರ್ಮುಗಂ ಅಳಲು ತೋಡಿಕೊಂಡಿದ್ದು, ಕೊರೊನಾ ಕಾಲದಲ್ಲಿ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ ನಮಗೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಒಂದೂವರೆ ವರ್ಷದಿಂದ ಸಂಬಳವನ್ನೇ ಕೊಟ್ಟಿಲ್ಲ. ಅಧಿಕಾರಿಗಳು ಎರಡುಮ್ಮೂರು ದಿನ ವೇತನ ಬರುವುದು ತಡವಾದ್ರೆ ಚಡಪಡಿಸುತ್ತಾರೆ. ಆದರೆ ನಮಗೆ 18 ತಿಂಗಳಿಂದ ವೇತನವನ್ನೇ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಪಂ ವ್ಯಾಪ್ತಿಯಲ್ಲಿ 107 ಗ್ರಾಮ ಪಂಚಾಯತಿಗಳ 152 ಪೌರ ಕಾರ್ಮಿಕರಲ್ಲಿ ಕೇವಲ 60 ಮಂದಿ ಮಾತ್ರ ಅನುಮೋದನೆಗೊಂಡಿದ್ದು, ಉಳಿದವರ ಸ್ಥಿತಿ ಅತಂತ್ರವಾಗಿದೆ. ಹಂದಿ ಕೂಡ ವಾಸ ಮಾಡಲಾರದ ಮನೆಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ನನಗೇ ಮನೆ ಇಲ್ಲ. ಯಳಂದೂರು ತಾಲೂಕಿನ ಹೊನ್ನೂರಿನಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಸೇರಿಕೊಂಡಂತೆ ಶೆಡ್ ಹಾಕಿಕೊಂಡಿದ್ದೇನೆ. ಕೂಡಲೇ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪೌರ ಕಾರ್ಮಿಕರ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ ಎಂದು ಒತ್ತಾಯಿಸಿದರು.