ಗುಂಡ್ಲುಪೇಟೆ: ತಾಲೂಕಿನಿಂದ ಕೇರಳಕ್ಕೆ ಅಕ್ರಮವಾಗಿ ನಾಲ್ಕು ಮೂಟೆ ಗುಟ್ಕಾ ಸಾಗಿಸುತ್ತಿದ್ದ ಭೀಮನಬೀಡು ಗ್ರಾಮದ ಮಲ್ಲು ಮತ್ತು ಕೃಷ್ಣ ಎಂಬುವರನ್ನು ಕೇರಳದ ಸುಲ್ತಾನ್ ಬತ್ತೇರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ತಾಲೂಕಿನಿಂದ ತರಕಾರಿ ತುಂಬಿದ ಲಾರಿಗಳಲ್ಲಿ ಅಕ್ರಮವಾಗಿ ಗುಟ್ಕಾ ಸಾಗಣೆ ಮಾಡುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಪೊಲೀಸರು ತಗರಪಾಡಿ ಎಂಬ ಸ್ಥಳದಲ್ಲಿ ತಪಾಸಣೆ ಮಾಡಿ ಬಂಧಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿರುವುದರಿಂದ ಗುಟ್ಕಾಗೆ ಹೆಚ್ಚಿನ ಬೇಡಿಕೆ ಇದೆ. ಕರ್ನಾಟಕ ವಿವಿಧ ಭಾಗಗಳಿಂದ ಈ ರೀತಿಯಲ್ಲಿ ಅಕ್ರಮವಾಗಿ ಗುಟ್ಕಾ ಕೇರಳಕ್ಕೆ ಸಾಗಣೆಯಾಗುತ್ತಿದೆ. ಕೆಲವರು ಇದೇ ವೃತ್ತಿಯನ್ನಾಗಿಸಿಕೊಂಡು ತಾಲೂಕಿನಿಂದ ಅಲ್ಲಿಗೆ ಸಾಗಣೆ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಾಲೂಕಿನ ಪೊಲೀಸ್ ಮಾಹಿತಿದಾರರೊಬ್ಬರು ತಿಳಿಸಿದರು.