ಚಾಮರಾಜನಗರ: ಕೋವಿಡ್-19 ಭೀತಿ ಎಲ್ಲರನ್ನೂ ತತ್ತರಿಸುವಂತೆ ಮಾಡಿದೆ. ಜೀವದ ಹಂಗು ತೊರೆದು ವೈದ್ಯರು, ನರ್ಸ್ ಗಳು ಅದೇ ರೀತಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಚಾಮರಾಜನಗರದ ಈ ಮೂವರು ಪೊಲೀಸರು ನಿವೃತ್ತಿ ಅಂಚಿನಲ್ಲಿದ್ದರೂ ಯುವಕರನ್ನು ನಾಚಿಸುವಂತೆ ದುಡಿಯುತ್ತಿದ್ದಾರೆ.
ಚಾಮರಾಜನಗರ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಸಿದ್ದರಾಜನಾಯ್ಕ ಅವರಿಗೆ 59 ವರ್ಷವಾಗಿದೆ. ಇನ್ನು, ಎಎಸ್ಐ ಮಹೇಶ್ ಅವರಿಗೆ 57 ವರ್ಷ, ನಾಗಪ್ಪ ಅವರಿಗೆ 59 ವರ್ಷವಾಗಿದೆ. ಆದ್ರೆ ಇವರು ದಣಿವರಿಯದಂತೆ ಬೆಳಗ್ಗೆ 5.30 ಕ್ಕೆ ಕಾರ್ಯ ಆರಂಭಿಸಿ, ರಾತ್ರಿ 8.30 ರವರೆಗೂ ಮಾಡುತ್ತಾರೆ.
ಕೊರೊನಾ ಲಾಕ್ಡೌನ್ ಪ್ರಾರಂಭವಾದಗಿನಿಂದ ಇಂದಿನವರೆಗೂ ಮೂವರು ಒಂದು ದಿನ ರಜೆಯನ್ನು ಪಡೆದಿಲ್ಲ. ಬೆಳಗ್ಗೆ ಎಪಿಎಂಸಿಯಿಂದ ಕಾರ್ಯ ಪ್ರಾರಂಭಿಸಿ, ರಾತ್ರಿವರೆಗೂ ಜನರಿಗೆ ಸಾಮಾಜಿಕ ಅಂತರದ ಪಾಠ, ಸಂಚಾರ ನಿಯಮ ಗಾಳಿಗೆ ತೂರಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವವರ ಚಳಿಯನ್ನು ಬಿಡಿಸುತ್ತಿದ್ದಾರೆ.
ಸಾಮಾಜಿಕ ಅಂತರದ ಜಾಗೃತಿ:
ಸಾಮಾಜಿಕ ಅಂತರ, ಮುಖಗವಸು ಇನ್ನಿತರ ಚಟುವಟಿಕೆ ಮೇಲೆ ಕಣ್ಣಿಡುವ ಇವರು ಬಳಿಕ ಅಂಗಡಿ ಮುಂಗಟ್ಟುಗಳು, ಮಾಂಸದಂಗಡಿಗಳು, ಬಸ್ ನಿಲ್ದಾಣದ ಮುಂದೆ ಸಾಮಾಜಿಕ ಅಂತರದ ಜಾಗೃತಿ ಮೂಡಿಸುತ್ತಾರೆ. ಬಳಿಕ, ಸಿಟಿ ರೌಂಡ್ಸ್, ಲಾಕ್ಡೌನ್ ಪಾಲನೆ, ಪುಂಡರ ಅನಗತ್ಯ ಓಡಾಟ, ಗುಂಪು ಸೇರಿ ಹರಟೆ ಹೊಡೆಯುವವರ ಮೇಲೆ ಕಣ್ಣಿಡುತ್ತಾರೆ. ಸಂಜೆಯಿಂದ ನಗರ ರೌಂಡ್ಸ್ ಹಾಕಿ ಸಂಜೆ 7 ಕ್ಕೆ ಅಂಗಡಿ, ವೈನ್ ಸ್ಟೋರ್ ಮುಚ್ಚಿಸಿ ಗುಂಪು ಸೇರುವವರನ್ನು ಮನೆಗೆ ಕಳುಹಿಸುತ್ತಾರೆ. ಈ ನಡುವೆ, ಠಾಣೆಗೆ ಬರುವ ಪ್ರಕರಣಗಳ ವಿಚಾರಣೆ, ಹಿಂದಿನ ಕೇಸ್ಗಳ ತನಿಖೆಯತ್ತ ಗಮನ ಹರಿಸುವ ಇವರು ದಣಿವರಿಯದಂತೆ ದುಡಿಯುತ್ತಿದ್ದಾರೆ.
ಇವರ ತಲೆ, ಕಣ್ಣಲ್ಲಿದೆ ವೀರಪ್ಪನ್ ಬುಲೆಟ್:
ಪಿಎಸ್ಐ ಸಿದ್ದರಾಜನಾಯ್ಕ ವೀರಪ್ಪನ್ ಕಾರ್ಯಾಚರಣೆಯಲ್ಲೂ ಪಾಲ್ಗೊಂಡವರಾಗಿದ್ದು, ಈಗಲೂ ಆತ ಹಾರಿಸಿದ ಗುಂಡುಗಳು ಇವರ ತಲೆ ಮತ್ತು ಕಣ್ಣಿನಲ್ಲಿ ಹಾಗೆ ಇದೆ. ಜೊತೆಗೆ, ಮಧುಮೇಹಿಯೂ ಆಗಿರುವ ಇವರು ಯಾವುದಕ್ಕೂ ಬಗ್ಗದೇ ಕೊರೊನಾ ತಡೆಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಎಎಸ್ಐ ನಾಗಪ್ಪ ಅವರೂ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದು, ಮಹಾಮಾರಿ ವಿರುದ್ಧ ಹೋರಾಡಿ ಜನರನ್ನು ರಕ್ಷಿಸುವ ಪುಣ್ಯದ ಕಾರ್ಯ ಇದಾಗಿದೆ ಎಂತಲೇ ದುಡಿಯುತ್ತಿದ್ದಾರೆ.
ಮಹೇಶ್ ಅವರಿಗೂ 57 ವರ್ಷ ತುಂಬಿದ್ದು, ನಿವೃತ್ತಿ ವೇಳೆಯಲ್ಲಿ ಈ ಹಿಂದೆ ಕಂಡು ಕೇಳರಿಯದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರ್ಯ ಮಾಡುವುದರಲ್ಲಿ ನಮ್ಮದೂ ಒಂದು ಅಳಿಲು ಸೇವೆ ಇದಾಗಿದೆ ಎಂದು ಕೆಲಸ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ.