ಚಾಮರಾಜನಗರ: ಕರ್ತವ್ಯಲೋಪ ಆರೋಪದ ಮೇಲೆ ಚಾಮರಾಜನಗರ ಗ್ರಾಮಾಂತರ ಸಿಪಿಐ, ಚಾಮರಾಜನಗರ ಪೂರ್ವ ಠಾಣೆ ಪಿಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್ರನ್ನು ಅಮಾನತುಪಡಿಸಿ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಆದೇಶಿಸಿದ್ದಾರೆ.
ಸಿಪಿಐ ಕೆ.ಎಂ. ಮಂಜು, ಪಿಎಸ್ಐ ಸುನೀಲ್ ಹಾಗೂ ಹೆಡ್ಕಾನ್ಸ್ಟೇಬಲ್ ನಾಗನಾಯಕ ಅಮಾನತುಗೊಂಡವರು. ಮೇ 15ರಂದು ಮರಳು ತುಂಬಿದ್ದ ಟಿಪ್ಪರ್ವೊಂದು ನಿಂತಿದ್ದರ ಮಾಹಿತಿ ಪಡೆದು ಸಿಪಿಐ ತೆರಳಿದ್ದ ವೇಳೆ ಪೊಲೀಸ್ರನ್ನು ಕಂಡ ಲಾರಿ ಚಾಲಕ ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಸಿಲುಕಿ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಆದರೆ, ಮರಳು ಸಾಗಣೆ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕಲು ಯತ್ನಿಸುತ್ತಿರುವ ಆರೋಪ ಇದೀಗ ಹೊರಬಿದ್ದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸದೇ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಮೂವರನ್ನು ಅಮಾನತು ಗೊಳಿಸಿದ್ದು, ಹೆಚ್ಚಿನ ತನಿಖೆಗೆ ಐಜಿಪಿ ಸೂಚಿಸಿದ್ದಾರೆ.