ಚಾಮರಾಜನಗರ: ಹನೂರು ತಾಲೂಕಿನ ರಾಮಾಪುರ ಗ್ರಾಮಕ್ಕೆ ಬೆಂಗಳೂರು, ಮೈಸೂರಿನಿಂದ ಯಾರೇ ಊರಿಗೆ ಬಂದರೂ ಮೊದಲು ರಾಮಾಪುರ ಆಸ್ಪತ್ರೆಗೆ ಭೇಟಿ ನೀಡುವಂತೆ ಡಂಗೂರ ಸಾರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮುಖಂಡರು ಪಂಚಾಯತಿ ಸೇರಿ ಬೆಂಗಳೂರು, ಮುಂಬೈ, ಮೈಸೂರಿನಲ್ಲಿ ನೌಕರಿ ಮಾಡುತ್ತಿರುವ ಯಾರೊಬ್ಬರು ಕೂಡ ಕೊರೊನಾ ವೈರಸ್ ಕಡಿಮೆಯಾಗುವ ತನಕ ಗ್ರಾಮಕ್ಕೆ ಬರಬಾರದು ಎಂದು ಕಟ್ಟಾಜ್ಞೆ ಮಾಡಿದ್ದು, ಈ ಕುರಿತು ಅವರ ಪಾಲಕರಿಗೆ ಕೊರೊನಾದ ಕರಾಳತೆಯನ್ನು ಮನದಟ್ಟು ಮಾಡಿದ್ದಾರೆ.
ಭಾರತ ಲಾಕ್ಡೌನ್ ಆದರೂ ಕೂಡ ಗ್ರಾಮಸ್ಥರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರಿಂದ ಹಾಗೂ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದರಿಂದ ಎಚ್ಚೆತ್ತ ಯಳಂದೂರು ತಾಲೂಕಿನ ಹೊಂಗನೂರು ಗ್ರಾಮದ ಮುಖಂಡರು ಇಂದು ಪಂಚಾಯತಿ ಸೇರಿ ಕಟ್ಟಾಜ್ಞೆ ಹೊರಡಿಸಿದ್ದಾರೆ. ಹೆಂಗಸರಾಗಲಿ, ಗಂಡಸರಾಗಲಿ ಮನೆ ಹೊರಗೆ ಕುಳಿತರೆ 1 ಸಾವಿರ ರೂ. ದಂಡ, 4-5 ಜನ ಸೇರಿದರೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಉಪ್ಪಾರ ಬೀದಿಯನ್ನು ಸ್ಥಳೀಯರಿಗಷ್ಟೇ ಪ್ರವೇಶಕ್ಕೆ ಅವಕಾಶ ನೀಡಿದ್ದು, ಬೇರೆಯವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.