ಚಾಮರಾಜನಗರ/ಕೊಳ್ಳೇಗಾಲ: ಮಂಡ್ಯ ಪತ್ರಕರ್ತರ ಮೇಲೆ ಎಂ.ಎಲ್.ಸಿ ಶ್ರೀಕಂಠೇಗೌಡರ ಪುತ್ರ ಹಲ್ಲೆ ನಡೆಸಿರುವುದನ್ನು ಸಚಿವ ಸುರೇಶ್ ಕುಮಾರ್ ಖಂಡಿಸಿದ್ದಾರೆ.
ಕೊಳ್ಳೇಗಾಲದ ಬಿಜೆಪಿ ಮಾಜಿ ಶಾಸಕ ನಂಜುಂಡಸ್ವಾಮಿ ಅವರು ಬಡವರು, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸುರೇಶ್ ಕುಮಾರ್ ಅವರು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೋವಿಡ್ -19 ತಪಾಸಣೆ ಮಾಡುವ ವೇಳೆ ಎಂ.ಎಲ್.ಸಿ ಶ್ರೀ ಕಂಠೇಗೌಡರ ಮಗ, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಯಾರೂ ಕೂಡ ಈ ರೀತಿ ಮಾಡಬಾರದು, ಅವರ ಈ ನಡವಳಿಕೆ ಒಪ್ಪುವಂತದ್ದಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಈ ರೀತಿ ನಡೆದುಕೊಳ್ಳಬಾರದು ಎಂದರು.
ಈಗಾಗಲೇ ಕೋವಿಡ್ -19 ವಿರುದ್ಧ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ತೊಂದರೆ ಕೊಡಬಾರದೆಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ ಎಂದು ಸಚಿವರು ತಿಳಿಸಿದರು.