ಕೊಳ್ಳೇಗಾಲ: ಕೊರೊನಾ ಸಂಕಷ್ಟದ ಸಮಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಅಪ್ರಸ್ತುತ. ಇದು ತಪ್ಪು. ಯಡಿಯೂರಪ್ಪ ಅವರು ಒಬ್ಬ ಉತ್ತಮ ಸಿಎಂ ಆಗಿ ಸರ್ಕಾರವನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.
ಕಳೆದೊಂದು ತಿಂಗಳಿಂದ 30 ಗುಂಪುಗಳಿಗೆ ಆರ್ಥಿಕ ಪರಿಹಾರ ಘೋಷಣೆ ಮಾಡಿ ಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಸರ್ಕಾರ ಮೈಮರೆತರೂ ಕೂಡ ಬಳಿಕ ಎಚ್ಚೆತ್ತುಕೊಂಡಿದೆ. ಯಡಿಯೂರಪ್ಪ ತಮ್ಮ ಕೆಲಸಗಳನ್ನು ಬೆಂಗಳೂರಿನಲ್ಲಿ ಕುಳಿತು ನಿರ್ವಹಣೆ ಮಾಡುತ್ತಿಲ್ಲ. ಬದಲಾಗಿ ಜಿಲ್ಲೆ ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಅವರವರ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಯುದ್ದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿರುವುದು ದುರಂತ.
ಯಡಿಯೂರಪ್ಪ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ. ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ರಾಜ್ಯಕ್ಕೆ ಕೊರೊನಾ 3ನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮೂರನೇ ಅಲೆಯನ್ನು ಎದುರಿಸಲು ಅವರೇ ಈ ಸರ್ಕಾರವನ್ನು ಮುನ್ನಡೆಸಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಮಹೇಶ್ ಹೇಳಿದರು.
'ನಾನು ಬಿಜೆಪಿ ಶಾಸಕನಲ್ಲ'
ಕೊರೊನಾ ವಿರುದ್ಧ ಎಲ್ಲರೂ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ನಾಯಕತ್ವ ಬದಲಾವಣೆಯ ಸಂದರ್ಭದ ಇದಲ್ಲ. ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಅವರು ಬಹಳಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರೇ ಮುಂದಿನ 2 ವರ್ಷವೂ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.