ಚಾಮರಾಜನಗರ: ಶಾಸಕ ಎನ್. ಮಹೇಶ್ ಆಗಾಗ್ಗೆ ವಿಭಿನ್ನ ರೀತಿಯಲ್ಲಿ ಜನಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಎಂಬಂತೆ ತಾವೇ ರಚಿಸಿದ ಪರಿಸರ ಗೀತೆಯನ್ನು ಹಾಡಿ ಸಭಿಕರನ್ನು ಮೋಡಿ ಮಾಡಿದ್ದಾರೆ.
ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮದಲ್ಲಿ ಪರಿಸರವೆಂದರೆ ತಮ್ಮ ಜೀವನಾಡಿ, ಪ್ರಾಣಿ- ಪಕ್ಷಿಗಳು ತಮ್ಮ ಗೆಳೆಯರು ಎಂಬರ್ಥದ ಗೀತೆಯನ್ನು ಹಾಡಿ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡರು.
ತಾವು ಕೊಡಗಿನಲ್ಲಿ ಅಧಿಕಾರಿಯಾಗಿದ್ದ ವೇಳೆ ಕಂಡ ಪರಿಸರನಾಶದ ಕುರಿತು ಮಹೇಶ್ ಈ ಹಾಡನ್ನು ರಚಿಸಿದ್ದರಂತೆ.
ಕೇಡುಗಾಲದ ಹೊತ್ತಿನಲ್ಲಿ, ಹೇಳುತೀನಿ ಒಂದು ಪದವ, ಕೇಳಿ ಜನರೇ- ಓ ನನ್ನ ಜನರೇ
ಭೂಮಿ ನಮ್ಮ ತಾಯಿ ತಂದೆ, ಕಾಡು ನಮ್ಮ ಬಂಧು-ಬಳಗ
ಪ್ರಾಣಿ-ಪಕ್ಷಿ ನಮ್ಮ ಗೆಳೆಯರು, ಗಿರಿ-ಮುಗಿಲು ನಮ್ಮ ರಕ್ಷಕರು
ಅವರೇ ನಮ್ಮ ಬದುಕಿನ ಜೀವನಾಡಿಗಳು....
ಎಂಬ ಪರಿಸರ ಗೀತೆಯನ್ನು ಗಾಯಕ ನರಸಿಂಹಮೂರ್ತಿ ಮತ್ತಿತರರೊಂದಿಗೆ ಹಾಡಿ ಎಲ್ಲರನ್ನೂ ಮೋಡಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಡಿಸಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಲತಾಕುಮಾರಿ, ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಇನ್ನಿತರರು ಇದ್ದರು.