ಚಾಮರಾಜನಗರ : ದೇಶದ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಗಾರೆ ಕೆಲಸಗಾರನೋರ್ವ ಮನೆಯಲ್ಲೇ ಭಾರತ ಮಾತೆಗೆ ಮಂದಿರ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿರುವ ಅಪರೂಪದ ಸಂಗತಿ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಲಾಕ್ಡೌನ್ ಸಂದರ್ಭದಲ್ಲಿ ರವಿಕುಮಾರ್ ಈ ಮಹತ್ಕಾರ್ಯ ಮಾಡಿದ್ದಾನೆ. ತಮ್ಮ ಮನೆಯ ಗೋಡೆಯನ್ನು ಕೆಡವಿ, ಹೊಸದಾಗಿ ಗೋಡೆ ನಿರ್ಮಿಸಿ ಭಾರತದ ಭೂಪಟ ಹಾಗೂ ರಾಷ್ಟ್ರಧ್ವಜವನ್ನು ನಿರ್ಮಿಸಿದ್ದಾರೆ.
ಇವರಿಗೆ ಚಿಕ್ಕಂದಿನಲ್ಲಿ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಮಹಾನ್ ಆಸೆಯಿತ್ತಂತೆ. ಆದರೆ, ಅನಿವಾರ್ಯ ಕಾರಣಗಳಿಂದ ಅವರ ಆಸೆ ನೆರವೇರಲಿಲ್ಲ. ಹಾಗಾಗಿ, ಮನೆಯಲ್ಲಿಯೇ ಭಾರತ ಭೂಪಟ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ರವಿಕುಮಾರ್, ಇಡೀ ವಿಶ್ವದಲ್ಲಿಯೇ ಭಾರತದಂತಹ ಮತ್ತೊಂದು ದೇಶ ಇರಲು ಸಾಧ್ಯವಿಲ್ಲ. ಇಲ್ಲಿನ ಸಮುದ್ರ, ಅರಣ್ಯ, ಹೋರಾಟ, ಧರ್ಮ, ಭಾಷೆಯ ಸೊಗಡು ಈ ಮಣ್ಣಲ್ಲಿದೆ. ಇಲ್ಲಿ ಹುಟ್ಟಿರುವುದೇ ನನ್ನ ಪುಣ್ಯ. ನನಗೇನಾದರೂ ದುಃಖವಾದರೆ, ಭಾರತ ಭೂಪಟದ ಕೆಳಗೆ ಮಲಗುತ್ತೇನೆ. ಆಗ ಮನಸ್ಸು ನಿರಾಳವೆನಿಸುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ರಾಜ್ಯದ ಯಾವುದೇ ಶಾಲೆಗಳಿಂದ ನನಗೆ ಸಾಮಗ್ರಿಗಳನ್ನು ಕೊಟ್ಟರೆ ಭಾರತ ಭೂಪಟವನ್ನು ಉಚಿತವಾಗಿ ನಿರ್ಮಿಸಿ ಕೊಡುತ್ತೇನೆ. ಭಾರತ ಎಂದರೆ ಕೇವಲ ಭೂಪಟವಲ್ಲ ಅದೊಂದು ಭಾವ, ಭಕ್ತಿ. ಮಕ್ಕಳಲ್ಲಿ ದೇಶಭಕ್ತಿ ಮೂಡಿದರೆ ನನ್ನ ಕೆಲಸ ಸಾರ್ಥಕ ಆಗಲಿದೆ ಎಂದು ತಿಳಿಸಿದರು.
ರವಿಕುಮಾರ್ ಅವರಷ್ಟೇ ಅಲ್ಲದೆ ಅವರ ಪತ್ನಿ, ಮಕ್ಕಳು ಕೂಡ ಭಾರತ ಮಾತೆಗೆ ನಮಿಸುತ್ತಾರೆ. ಪತಿಯ ಎಲ್ಲಾ ಕಾರ್ಯಗಳಿಗೂ ನನ್ನ ಬೆಂಬಲವಿದೆ. ಯೋಧ ಗುರು ಸ್ಮಾರಕದಲ್ಲಿ ಭಾರತ ಭೂಪಟ ರಚಿಸಬೇಕೆಂಬ ಮಹದಾಸೆ ಇದ್ದು, ಮಂಡ್ಯ ಜಿಲ್ಲಾಡಳಿತ ಇದಕ್ಕೆ ಅನುವು ಮಾಡಿಕೊಡಬೇಕು ಎಂದು ರವಿಕುಮಾರ್ ಪತ್ನಿ ಆಶಾರಾಣಿ ಹೇಳಿದರು.