ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಎಡಬೆಟ್ಟ ಹಾಗೂ ಕರಿವರದರಾಜಸ್ವಾಮಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಕುರುಚಲು ಕಾಡು ಭಸ್ಮವಾಗಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವಂತೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಕ್ಷಣಕ್ಷಣಕ್ಕೂ ವ್ಯಾಪಿಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕರಿವರದರಾಜನಸ್ವಾಮಿ ಬೆಟ್ಟದಿಂದ ಕಿಮೀ ದೂರದವರೆಗೂ ಬೆಂಕಿಯ ಕೆನ್ನಾಲಿಗೆ ಗಾಳಿಯ ರಭಸಕ್ಕೆ ವ್ಯಾಪಿಸುತ್ತಿದ್ದು, ಭಾರೀ ಗಾಳಿಯಿಂದ ಕಾರ್ಯಾಚರಣೆಗೆ ತೊಂದರೆ ಉಂಟಾಗಿದೆ.
ಒಂದು ಬಾರಿ ಬೆಂಕಿ ನಂದಿಸಲು ಯಶಸ್ವಿಯಾದರಾದರೂ ಗಾಳಿ ಸಮಸ್ಯೆಯಿಂದ ಇಡೀ ಬೆಟ್ಟವೇ ಅಗ್ನಿಗೆ ಆಹುತಿಯಾಗುತ್ತಿದೆ. ಅರಣ್ಯ ಭೂಮಿ ಹಾಗೂ ಕಂದಾಯ ಇಲಾಖೆ ಭೂಮಿಯಲ್ಲೂ ಬೆಂಕಿ ಹರಡಿದ್ದು, ಕೃಷಿ ಜಮೀನಿನಲ್ಲಿ ಹಾಕಿದ ಬೆಂಕಿಯಿಂದ ಈ ಅನಾಹುತ ನಡೆದಿದೆ ಎನ್ನಲಾಗಿದೆ. ಈ ತಿಂಗಳಿನಲ್ಲಿ ಎರಡನೇ ಸಲ ಎಡಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ.