ಚಾಮರಾಜನಗರ: ನಂಜನಗೂಡಿನ ಕಾರ್ಖಾನೆಗೆ ರಾತ್ರಿ ಪಾಳಿಗೆ ತೆರಳುವ ಕಾರ್ಮಿಕರು ಚೆಕ್ಪೋಸ್ಟ್ಗಳ ಸಮಯ ನಿಗದಿಯಿಂದ ಪೀಕಲಾಟಕ್ಕೆ ಸಿಲುಕಿ, ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಸಂಜೆ 7 ರ ಬಳಿಕ ಅಂತರ ಜಿಲ್ಲೆಗೆ ತೆರಳಲು ನಿರ್ಬಂಧವಿರುವುದರಿಂದ ಗುಂಡ್ಲುಪೇಟೆ ಭಾಗದಿಂದ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಂಜನಗೂಡಿನಲ್ಲಿರುವ ಜುಬಿಲಂಟ್, ಎಟಿ&ಎಸ್ ಸೇರಿದಂತೆ ವಿವಿಧ ಕಾರ್ಖಾನೆಗಳಿಗೆ ತೆರಳುವ ರಾತ್ರಿ ಪಾಳಿ ಕಾರ್ಮಿಕರು ಕೆಲಸಕ್ಕೆ ಹೋಗಲಾಗದೆ, ಹೋದವರು ಮತ್ತೆ ಬರಲಾಗದಿರುವ ಸಂದಿಗ್ಧತೆ ಎದುರಿಸುತ್ತಿದ್ದಾರೆ.
ಈಗಾಗಲೇ ಸರ್ಕಾರದ ಅನುಮತಿಯಂತೆ ಕಾರ್ಖಾನೆಗಳು ಪ್ರಾರಂಭವಾಗಿದೆ. ಆದರೆ, ಗುಂಡ್ಲುಪೇಟೆ ಭಾಗದಿಂದ ನಂಜನಗೂಡಿಗೆ ತೆರಳಬೇಕಾದರೆ ರಾಷ್ಟ್ರೀಯ ಹೆದ್ದಾರಿಯ ಹಿರಿಕಾಟಿ ಮತ್ತು ಎಲಚಗೆರೆ ಗೇಟ್ಗಳಲ್ಲಿ ಪ್ರತ್ಯೇಕವಾಗಿ ಎರಡು ಚೆಕ್ಪೋಸ್ಟ್ಗಳಿವೆ. ಇಲ್ಲಿ ಸಂಜೆ 7ರಿಂದ ಬೆಳಗ್ಗೆ 7ಗಂಟೆವರೆಗೆ ನಿಷೇಧಿಸಿದ್ದು,ಯಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ.
ಹೀಗಾಗಿ ತಾಲೂಕಿನ ಕಾರ್ಮಿಕರು ಕಾರ್ಖಾನೆಗಳ ಕೆಲಸಕ್ಕೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಮೂವತ್ತಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, 4 ಶಿಫ್ಟ್ಗಳಲ್ಲಿ ಕಾರ್ಯಾಚರಣೆ ನಡೆಸುತ್ತವೆ.
ಬೆಳಗ್ಗೆ 7 ರಿಂದ 3 ಗಂಟೆವರೆಗೆ, 3 ರಿಂದ ರಾತ್ರಿ 11 ಗಂಟೆ, ರಾತ್ರಿ 11ರಿಂದ ಬೆಳಗ್ಗೆ 7, ಬೆಳಗ್ಗೆ 9 ರಿಂದ ಸಂಜೆ 5.30ರ ವರೆಗೆ ಪಾಳಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಮಧ್ಯಾಹ್ನ 3-11, ರಾತ್ರಿ 11-7ರ ಪಾಳಿಗೆ ನಿಯೋಜನೆಗೊಂಡವರ ಸ್ಥಿತಿ ಹೀನಾಯವಾಗಿದೆ. ಕೆಲವರು ಚೆಕ್ಪೋಸ್ಟ್ ಸಿಬ್ಬಂದಿ ಕಣ್ತಪ್ಪಿಸಿ,ಸ್ಮಶಾನ, ಕೆರೆ ಏರಿಗಳ ಮೂಲಕ ನಂಜನಗೂಡಿನ ಹಾದಿ ಹಿಡಿಯುತ್ತಿದ್ದಾರೆ.
ಬಹುಪಾಲು ಕಾರ್ಮಿಕರು ಚೆಕ್ಪೋಸ್ಟ್ಗಳಲ್ಲಿ ಬಿಡದಿರುವುದರಿಂದ ಮನೆಯಲ್ಲಿದ್ದು, ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜಿಲ್ಲಾಡಳಿತ ಈ ಕಾರ್ಮಿಕರತ್ತ ಗಮನಹರಿಸ, ಪಾಸ್ ಇಲ್ಲವೇ ಕಂಪನಿ ಐಡಿ ಕಾರ್ಡ್ಗಳನ್ನ ಪರಿಶೀಲಿಸಿ ಸಂಚಾರಕ್ಕೆ ಅನುಮತಿ ಕೊಡಬೇಕಿದೆ.