ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ನಾಗಮಲೆಯ ಕಾಡುಹಾದಿಯಲ್ಲಿ ಒಂಟಿ ಸಲಗವೊಂದು ಜನರಿಗೆ ದಾರಿ ಕೊಡದೇ ಒಂದು ಗಂಟೆಗೂ ಹೆಚ್ಚು ಕಾಲ ಅವರನ್ನು ಕಾಯಿಸಿದ ಘಟನೆ ನಡೆದಿದೆ.
20 ಕ್ಕೂ ಹೆಚ್ಚು ಭಕ್ತರು ಇಂದು ನಾಗಮಲೆಗೆ ತೆರಳುವಾಗ ಇಂಡಿಗನತ್ತ ಬಳಿ ಸಲಗವೊಂದು ದಾರಿ ಮಧ್ಯೆಯೇ ಒಂದು ತಾಸು ನಿಂತಿದೆ. ಭಕ್ತರು, ಅರಣ್ಯ ಇಲಾಖೆ ವಾಚರ್ಗಳು ಕಿರುಚಾಡಿದರೂ ದಾರಿಬಿಟ್ಟು ಕದಲಿಲ್ಲ. ಇದರಿಂದ ಭಕ್ತರು ಕೆಲಕಾಲ ಆತಂಕಗೊಂಡಿದ್ದರು.
ಇನ್ನು, ಇದೇ ಆನೆ ಬೆಳಗಿನ ಜಾವ ಹುಣಸೆಮರದ ರೆಂಬೆಗಳನ್ನು ಮುರಿದು ಹಾಕಿತ್ತು. ಅಲ್ಲದೆ ಕಳೆದ 4-5 ದಿನಗಳಿಂದ ರಸ್ತೆ ಬಳಿಯೇ ಬಂದು ನಿಲ್ಲುತ್ತಿರುವುದರಿಂದ ಸ್ಥಳೀಯರು ಮತ್ತು ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ನಾಗಮಲೆಯಲ್ಲಿ ಮಹದೇಶ್ವರನ ದೇಗುಲವಿದ್ದು 15 ಕಿಮೀ ಕಾಡಿನೊಳಗೆ ನಡೆದುಕೊಂಡೇ ದರ್ಶನ ಪಡೆಯಬೇಕಿದೆ.