ಚಾಮರಾಜನಗರ : ಸೋಲಾರ್ ಬೇಲಿ ಹಾಗೂ ಕಲ್ಲಿನ ತಡೆಗೋಡೆ ಬೀಳಿಸಿ ಆನೆಗಳ ಹಿಂಡು ಲಗ್ಗೆಯಿಟ್ಟು ರಾಗಿ ಫಸಲನ್ನು ನೆಲಸಮಗೊಳಿಸಿದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಡೆದಿದೆ.
ಚಿನ್ನಪ್ಪಿ ಹಾಗು ಮಹಾದೇವಸ್ವಾಮಿ ಎಂಬ ರೈತರ ಒಂದೂವರೆ ಎಕರೆ ರಾಗಿ ಫಸಲನ್ನು ತುಳಿದು ನಾಶಪಡಿಸಿವೆ. ಉತ್ತಮ ಮಳೆಯಾಗಿ ಅರಣ್ಯದಲ್ಲಿ ತೊರೆ ಕೆರೆಕಟ್ಟೆಗಳು ತುಂಬಿ ಭರ್ತಿಯಾಗಿದ್ದರೂ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಫಸಲು ನಾಶಗೊಳಿಸುತ್ತಿರುವುದಕ್ಕೆ ರೈತರು ಕಂಗಲಾಗಿದ್ದಾರೆ.
ಕಟ್ಟೆ ಹಾಗೂ ಸೋಲಾರ್ ಬೇಲಿಯನ್ನು ನಾಶಗೊಳಿಸಿ ಜಮೀನಿಗೆ ನುಗ್ಗಿ ಫಸಲು ನಾಶಗೊಳಿಸಿರುವುದರಿಂದ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.