ಚಾಮರಾಜನಗರ: ನಗರದ ಚಾಮರಾಜೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಜಿಲ್ಲಾ ದಸರಾಗೆ ಚಾಲನೆ ನೀಡಿದರು.
ಜಿಲ್ಲಾ ದಸರಾ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಂದಿನ ಜಿಲ್ಲಾ ದಸರಾದಲ್ಲಿ ಭಾಗಿಯಾಗಲಿಲ್ಲ. ಆದರೆ ಈ ಹಬ್ಬದ ಸಮಯದಲ್ಲಿ ಜಿಲ್ಲೆಯ ಜನತೆಗೆ ಕೆಲ ಸಿಹಿ ಸುದ್ದಿಗಳನ್ನು ಹೇಳಬೇಕಿದೆ. ನಗರದ ಬಿ.ರಾಚಯ್ಯ ಜೋಡಿ ರಸ್ತೆಗೆ ನಗರಸಭೆ ವತಿಯಿಂದ ₹10 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಸಿ ಕತ್ತಲು ಮುಕ್ತ ರಸ್ತೆಯನ್ನಾಗಿ ಮಾಡಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ.
![Drive to Simple Dussera in Chamarajanagar](https://etvbharatimages.akamaized.net/etvbharat/prod-images/9208123_thumbn.jpg)
ಹಾಗೆಯೇ ಎನ್ಹೆಚ್-209 ರಸ್ತೆಯು ನಗರಸಭೆ ವ್ಯಾಪ್ತಿಯಲ್ಲಿ 6 ಕಿ.ಮೀ. ಹಾದು ಹೋಗಿದ್ದು, ಗಾಳಿಪುರ ಮುಖ್ಯ ರಸ್ತೆ, ಸ್ಟೇಡಿಯಂ ರಸ್ತೆ, ಕುಲುಮೆ ರಸ್ತೆ ಹಾಗೂ 13 ಮತ್ತು 14ನೇ ವಾರ್ಡಿನ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಸುವ ಬಗ್ಗೆ ನಗರಸಭೆ ವತಿಯಿಂದ ಅಂದಾಜು ₹ 112 ಲಕ್ಷಗಳಿಗೆ ಟೆಂಡರ್ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳಿಗೆ ಎಲ್ಇಡಿ ದೀಪ ಅಳವಡಿಸಿ ಚಾಮರಾಜನಗರವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.