ಚಾಮರಾಜನಗರ : ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ ಜಾರಿಯಲ್ಲಿದ್ದು ಅರಣ್ಯ ಇಲಾಖೆ ಈಗ ಮತ್ತಷ್ಟು ನಿಯಮಗಳನ್ನು ಜಾರಿಗೆ ತಂದಿದೆ. ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಆಸನೂರು ವನ್ಯಜೀವಿ ವಲಯಕ್ಕೆ ಒಳಪಡುವ ದಿಂಬಂ ಘಟ್ಟ ಪ್ರದೇಶದಲ್ಲಿ 12 ಮತ್ತು 12ಕ್ಕಿಂತ ಹೆಚ್ಚು ಚಕ್ರಗಳನ್ನು ಹೊಂದಿರುವ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ಜೊತೆಗೆ, 16.2 ಟನ್ಗಿಂತ ಕಡಿಮೆ ಭಾರದ ವಾಹನಗಳು ಮಾತ್ರ ಸಂಚರಿಸಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ನಿಯಮದಿಂದ ಪ್ರಮಾಣದಲ್ಲಿ ಸರಕು ಸಾಗಾಟ ನಡೆಸುತ್ತಿದ್ದವರು ಕಂಗಲಾಗಿದ್ದಾರೆ. ದಿಂಬಂ ಮೂಲಕ ಚಲಿಸುತ್ತಿದ್ದ ವಾಹನಗಳು ಇನ್ನು ಬೆಂಗಳೂರು ದಾರಿಯಾಗಿ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ವಿಚಾರವಾಗಿ ನಿತ್ಯ ಲಾರಿ ಚಾಲಕರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಜಟಾಪಟಿ ನಡೆಯುತ್ತಿದೆ. ಲಾರಿ ಚಾಲಕರು ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ಉದ್ದೇಶದ ಸರಕು, ಭಾರದ ವಾಹನಗಳಿಗೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಂಚರಿಸಲು ಅವಕಾಶ ಇದೆ. ಲಘು ವಾಹನಗಳು ಬೆಳಗ್ಗೆ 6ರಿಂದ ರಾತ್ರಿ 9 ಗಂಟೆವರೆಗೆ ಸಂಚರಿಸಬಹುದು. ಎಲ್ಲ ವಾಣಿಜ್ಯ ವಾಹನಗಳು ಚೆಕ್ಪೋಸ್ಟ್ನಲ್ಲಿ ಅರಣ್ಯ ಇಲಾಖೆ ನಿಗದಿಪಡಿಸಿರುವ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ಅರಣ್ಯ ಇಲಾಖೆ ನಿಯಮ ರೂಪಿಸಿದೆ. ಸಾರಿಗೆ ಬಸ್ಗಳಿಗೆ ಕೂಡ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡಿಲ್ಲ.
![dhimbam ghat Brake for traffic on 12 wheeled vehicles](https://etvbharatimages.akamaized.net/etvbharat/prod-images/kn-cnr-01-rules-av-ka10038_11042022123011_1104f_1649660411_646.jpg)
ತುರ್ತುಸೇವೆಗೆ ಅವಕಾಶ : ಆ್ಯಂಬುಲೆನ್ಸ್, ತುರ್ತು ಹಾಗೂ ವೈದ್ಯಕೀಯ ಉದ್ದೇಶದ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಪಾಸ್ ಹೊಂದಿರುವ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ವಾಹನಗಳು, ಸರ್ಕಾರಿ ವಾಹನಗಳು, ಹಾಲಿನ ವಾಹನ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ನೆಲೆಸಿರುವವರ ವಾಹನಗಳಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ನುಗ್ಗಿಕೇರಿ ಗಲಾಟೆ.. ಇದ್ಯಾವಾಗ್ಲೂ ಆ್ಯಕ್ಷನ್ಗೆ ರಿಯಾಕ್ಷನ್ ಆಕ್ಕೊಂತಾ ಹೋಗೋದು.. ಶಾಸಕ ಬೆಲ್ಲದ್