ಕೊಳ್ಳೇಗಾಲ : ಕೊರೊನಾ ಮುಕ್ತವಾಗಿದ್ದ ಚಾಮರಾಜನಗರ ದಕ್ಷಿಣ ಭಾರತದಲ್ಲೇ ಹಸಿರು ಜಿಲ್ಲೆಯಾಗಿ ಹೊರಹೊಮ್ಮಿ ಹೆಸರು ಮಾಡಿತ್ತು. ಸರ್ಕಾರ ಇಲ್ಲಿನ ಜಿಲ್ಲಾಡಳಿತ ವ್ಯವಸ್ಥೆಗೂ ಭೇಷ್ ಎಂದು ಬೆನ್ನು ತಟ್ಟಿತ್ತು.
ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದವರಿಂದ ಕೊರೊನಾ ಸೊಂಕು ಗಡಿಯೊಳಗೆ ನುಸುಳಿ, ಇಂದು ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಗುಣಮುಖರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ನಿವಾರಿಸಲು ಸಜ್ಜಾಗಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಇಂಜಿನಿಯರಿಂಗ್ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬಿಸಿನೀರು ಮತ್ತು ಶೌಚಾಲಯದಲ್ಲಿ ಬೆಳಕಿನ ಸಮಸ್ಯೆ ಹಾಗೂ ಆಹಾರದ ಪೂರೈಕೆ ವಿಳಂಬವಾಗುತ್ತಿದೆ. ಕೊನೆಕೊನೆಯ ದಿನಗಳಲ್ಲಿ ಗುಣಮಟ್ಟವು ಅಷ್ಟಕಷ್ಟೇ ಎಂದು ಬಾಣಂತಿ ಸೇರಿ ಗುಣಮುಖರಾದವರು ಆರೋಪಿಸಿದ್ದಾರೆ.
ಈಟಿವಿ ಭಾರತಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಬಾಣಂತಿ ದೀಪು, ಕೊರೊನಾ ನಿವಾರಿಸಲು ತೆರೆಯಲಾಗಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬೀಸಿ ನೀರಿನ ವ್ಯವಸ್ಥೆ ಕೊರತೆಯಿತ್ತು. ಚಿಕಿತ್ಸೆಗಾಗಿ ತೆರಳಿದ್ದ ನಮಗೆ ಇದರಿಂದ ಸಮಸ್ಯೆ ಉಂಟಾಯಿತು. ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿ ನೀರು ಇರಲೇಬೇಕು. ಆಗೊಮ್ಮೆ ತಣ್ಣೀರು ಬಳಸಿದರೆ ಮಗುವಿಗೂ, ನಮಗೂ ಶೀತವಾಗುವ ಸಾಧ್ಯತೆ ಹೆಚ್ಚಿರುತ್ತೆ ಎಂದರು.
ಈ ಸಮಯದಲ್ಲಿ ಶೀತ, ನೆಗಡಿಯಾದರೆ ಆತಂಕ ಮೂಡುತ್ತದೆ. ಮನೆಯಲ್ಲಿದ್ದರೆ ಪ್ರತಿ ಕೆಲಸಕ್ಕೂ ಬಿಸಿ ನೀರನ್ನೇ ಬಳಸುತ್ತೇವೆ. ಚಿಕಿತ್ಸೆಗಾಗಿ ನಾವಿದ್ದ ದಿನಗಳಲ್ಲಿ ಕುಡಿಯುವುದಕ್ಕೆ ಮಾತ್ರ ಬಿಸಿ ನೀರಿನ ವ್ಯವಸ್ಥೆ ಸೀಮಿತವಾಗಿತ್ತು. ಗೀಸರ್ ಕೆಟ್ಟು ನಿಂತಿತ್ತು. ಶೌಚಾಲಯದಲ್ಲಿ ಬೆಳಕಿನ ವ್ಯವಸ್ಥೆ ಇರಲಿಲ್ಲ. ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಇಂಜಿನಿಯರಿಂಗ್ ಕೇರ್ ಸೆಂಟರ್ ಎರಡರಲ್ಲೂ ಈ ಸಮಸ್ಯೆ ಇದೆ ಎಂದು ತಿಳಿಸಿದರು.
ಮತ್ತೋರ್ವ ಗುಣಮುಖ ತಿಲಕ್ರಾಜ್ ಮಾತನಾಡಿ, ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗಾಗಿದ್ದ ದಿನದಲ್ಲಿ ಆಹಾರ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಮೊದಲ ದಿನಗಳಿಗೆ ಹೋಲಿಸಿದ್ರೆ ಕೊನೆಯ ದಿನಗಳಲ್ಲಿ ಊಟದ ಗುಣಮಟ್ಟ ಅಷ್ಟಕಷ್ಟೇ.. ಶೌಚಾಲಯದಲ್ಲಿ ಬೆಳಕಿನ ಕೊರತೆ ಹೆಚ್ಚಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಅವರ ಗಮನಕ್ಕೆ ನಾನೇ ತಂದಿದ್ದೆ. ಆದರೆ, ನಂತರ ದಿನಗಳಲ್ಲಿ ದೂರು ನೀಡಿದ್ರೂ ಏನೂ ಪ್ರಯೋಜನವಾಗಲಿಲ್ಲ.
ಕೊರೊನಾ ನಿವಾರಣೆಗೆ ಸಜ್ಜಾಗಿರುವ ಜಿಲ್ಲೆಯ ಆಸ್ಪತ್ರೆಗಳಲ್ಲೂ ಮತ್ತಷ್ಟು ಸುಧಾರಣೆಗೊಂಡ್ರೆ, ಸೋಂಕಿತರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಗರ್ಭಿಣಿ, ಬಾಣಂತಿ, ಸಣ್ಣ ಮಕ್ಕಳಿಗೆ ಸರಿಯಾದ ರೀತಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗುಣಮುಖರ ಒತ್ತಾಯ.