ಚಾಮರಾಜನಗರ: ಕಳೆದ 6 ತಿಂಗಳುಗಳಿಂದ ಕೋವಿಡ್ ಭತ್ಯೆಯನ್ನು ಸರ್ಕಾರ ನೀಡದ ಹಿನ್ನೆಲೆಯಲ್ಲಿ ಚಾಮರಾಜನಗರ ಮೆಡಿಕಲ್ ಕಾಲೇಜಿನ ಆಸ್ಪತ್ರೆ ವೈದ್ಯರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಸಿಮ್ಸ್ನಲ್ಲಿ 136 ಮಂದಿ ಕಿರಿಯ ವೈದ್ಯರಿದ್ದು, ತುರ್ತು ಚಿಕಿತ್ಸೆ ಬಿಟ್ಟು ಉಳಿದವರು ಸೇವೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಹೊರರೋಗಿಗಳು ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಧೀಮಂತ್ ಮಾತನಾಡಿ, ಸಿಮ್ಸ್ ಆವರಣದಲ್ಲಿ ಮೊದಲ ದಿನ ಪ್ರತಿಭಟಿಸುತ್ತಿದ್ದು, 2ನೇ ದಿನ ಅಂದರೆ ನಾಳೆ (ಮಂಗಳವಾರ) ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡುತ್ತೇವೆ. ಇದಕ್ಕೂ ಸರ್ಕಾರ ಮಣಿಯದಿದ್ದಲ್ಲಿ 3ನೇ ದಿನ ತುರ್ತು ವಿಭಾಗದಿಂದಲೂ ಹೊರಗುಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಸರ್ಕಾರ ಕಿರಿಯ ವೈದ್ಯರು, ಇಂಟರ್ನಿಗಳಿಗೆ ಪ್ರತಿ ತಿಂಗಳು 10 ಸಾವಿರ ಕೋವಿಡ್ ಭತ್ಯೆ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ವರೆಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ನವೆಂಬರ್ ನಲ್ಲಿ ವೈದ್ಯರ ಹೋರಾಟ ತಾರಕಕ್ಕೇರಿದ್ದರಿಂದ ಸಚಿವ ಡಾ. ಕೆ ಸುಧಾಕರ್ ಹಣ ಬಿಡುಗಡೆಗೆ 10 ದಿನ ಸಮಯಾವಕಾಶ ಪಡೆದಿದ್ದರು. ಆದರೆ, ಅವರ ಭರವಸೆ ಕೂಡ ಹುಸಿಯಾದ ಹಿನ್ನೆಲೆಯಲ್ಲಿ ವೈದ್ಯರು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Doctors protest : ಮತ್ತೆ ಸರ್ಕಾರದ ವಿರುದ್ಧ ತಿರುಗಿಬಿದ್ದ ವೈದ್ಯರು, ಎಲ್ಲಾ ಸೇವೆಗಳು ಬಂದ್..!