ಚಾಮರಾಜನಗರ: ಅಕಾಲಿಕ ಮಳೆ ಜಿಲ್ಲೆಯ ಜನರನ್ನು ಕಂಗಾಲಾಗಿಸಿದ್ದರೆ, ರೈತರಿಗೆ ಸಂಕಷ್ಟ ತಂದಿಟ್ಟಿದೆ. ವಾಯುಭಾರ ಕುಸಿತದಿಂದ ಉಂಟಾದ ಸೈಕ್ಲೋನ್ ಹಾಗೂ ಪೂರ್ವ ಮುಂಗಾರಿನ ಮಳೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹತ್ತಾರು ಮನೆಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಅವಾಂತರವನ್ನೇ ಸೃಷ್ಟಿಸಿದೆ.
ಮಳೆ ಹಾನಿ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದು, ಕಳೆದ ಮಾರ್ಚ್ 19 ರಿಂದ ಏಪ್ರಿಲ್ 5 ರವರೆಗೆ ಜಿಲ್ಲೆಯಲ್ಲಿ 46 ಮನೆಗಳು ಕುಸಿದಿದ್ದು, ಜೋಳ ಹಾಗೂ ಕಬ್ಬು ಬೆಳೆದಿದ್ದ 33 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ತೋಟಗಾರಿಕೆ ವಿಭಾಗದಲ್ಲಿ ಅತೀ ಹೆಚ್ಚು ಹಾನಿಯಾಗಿದ್ದು, 149.93 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನೆಲಕಚ್ಚಿದೆ ಎಂದು ತಿಳಿಸಿದ್ದಾರೆ.
ಒಂದು ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು, 57 ವಿದ್ಯುತ್ ಕಂಬಗಳು ಗಾಳಿಮಳೆಗೆ ನೆಲಕ್ಕುರುಳಿವೆ ಎಂದು ಮಾಹಿತಿ ನೀಡಿದರು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲೇ ಹೆಚ್ಚು ಹಾನಿಯಾಗಿದ್ದು, ಎಲ್ಲರಿಗೂ ಪರಿಹಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೇಳುವುದು ಒಂದು ಮಾಡುವುದು ಇನ್ನೊಂದು: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪರದಾಟ