ಚಾಮರಾಜನಗರ: ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ ಕಾಣ್ತಿವೆ. ಹಾಗಾಗಿ, ಬೇಡರಪುರ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ತೆರೆಯಲಾಗಿದ್ದ ಕೋವಿಡ್ ಕೇರ್ ಸೆಂಟರ್ ಅನ್ನು ಭಾನುವಾರ ಇಲ್ಲವೇ ಸೋಮವಾರ ಸ್ಥಗಿತಗೊಳಿಸಲಾಗುತ್ತದೆ.

ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಡಿಹೆಚ್ಒ ಡಾ.ರವಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರಿಂದ ಹಾಗೂ ಗುಂಡ್ಲುಪೇಟೆ, ಸಂತೇಮರಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭವಾಗಿರುವುದರಿಂದ ಆ ಕೇಂದ್ರವನ್ನು ಮುಚ್ಚಲಾಗುತ್ತಿದೆ. ಬೇಡರಪುರ ಕೇಂದ್ರದಲ್ಲಿ 417 ಹಾಸಿಗೆ ಸಾಮಾರ್ಥ್ಯವಿತ್ತು. ಈಗ ಅಲ್ಲಿ ಕೇವಲ 4 ಮಂದಿ ಅಷ್ಟೇ ಇದ್ದಾರೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯ 100 ಹಾಸಿಗೆ ಅಲ್ಲದೇ ಸಂತೇಮರಹಳ್ಳಿಯಲ್ಲಿ 60 ಮತ್ತು ಗುಂಡ್ಲುಪೇಟೆಯಲ್ಲಿ 50 ಹಾಸಿಗೆಗಳ ಕೇರ್ ಸೆಂಟರ್ ಇದೆ. ಅಷ್ಟೇ ಅಲ್ಲ, ಕಬ್ಬಹಳ್ಳಿ ಮತ್ತು ಬೇಗೂರಿನಲ್ಲಿ 30 ಹಾಸಿಗೆ ಸಾಮಾರ್ಥ್ಯ ಹೊಂದಿರುವ ಸಿಸಿ ಸೆಂಟರ್ ತೆರೆಯಲು ಯೋಜಿಸಲಾಗಿದೆ ಎಂದರು.
ಆರಂಭದ ದಿನಗಳಲ್ಲಿ ತುರ್ತು ಪರಿಸ್ಥಿತಿ ಇದ್ದಿದ್ದರಿಂದ ಬೇಡರಪುರದಲ್ಲಿ ಸೆಂಟರ್ ತೆಗೆಯಲಾಯಿತು. ಈಗ ಜಿಲ್ಲಾದ್ಯಂತ ಕೇಂದ್ರಗಳನ್ನು ತೆರೆಯುತ್ತಿರುವುದರಿಂದ ಬೇಡರಪುರ ಕೇಂದ್ರವನ್ನು ಸ್ಥಗಿತಗೊಳಿಸಲಾಗುತ್ತದೆ. ಹಾಸಿಗೆಗಳ ಸ್ಥಳಾಂತರದ ಬಳಿಕ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಕಾಲೇಜಿನ ಉಪಯೋಗಕ್ಕೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹೋಂ ಐಸೋಲೇಷನ್ ವ್ಯವಸ್ಥೆಯೂ ಕೂಡ ಚಾಲ್ತಿಯಲ್ಲಿರುವುದು ಆರೋಗ್ಯ ಇಲಾಖೆಗೆ ಪ್ಲಸ್ ಪಾಯಿಂಟಾಗಿದ್ದು, ಜಿಲ್ಲೆಯ ಸಾಕಷ್ಟು ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲಿ ಐಸೋಲೇಟ್ ಆಗುತ್ತಿರುವುದರಿಂದ ಬೇಡರಪುರ ಕೋವಿಡ್ ಕೇರ್ ಸೆಂಟರ್ ಬಂದ್ ಆಗಲಿದೆ.