ಚಾಮರಾಜನಗರ: ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕಾರ್ಯಾಚರಣೆಯು 3ನೇ ದಿನಕ್ಕೆ ಕಾಲಿಟ್ಟಿದ್ದು, ಹುಂಡಿಪುರ-ಚೌಡಹಳ್ಳಿ ಗ್ರಾಮದ ರೈತರು ಜಮೀನಿಗೆ ತೆರಳದೇ- ಜಾನುವಾರುಗಳನ್ನು ಮೇಯಿಸಲಾಗದೇ ಪಡಿಪಾಟಲು ಪಡುತ್ತಿದ್ದಾರೆ.
ಹುಲಿಯ ಚಲನವಲನ ಅರಿಯಲು ಅಳವಡಿಸಿದ್ದ 200 ಕ್ಯಾಮೆರಾಗಳಲ್ಲೂ ಗುರುವಾರದಿಂದ ಹುಲಿ ಚಿತ್ರ ಸೆರೆಯಾಗದಿರುವುದು ಮತ್ತು ಡ್ರೋನ್ ಕ್ಯಾಮರಾದ ಕಣ್ಣಿಗೂ ಬೀಳದಿರುವುದು ಅರಣ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ.
ಹುಲಿ ಪತ್ತೆಯಾಗದಿರುವುದರಿಂದ ಹುಂಡಿಪುರ, ಚೌಡಹಳ್ಳಿ, ಕೆಬ್ಬೇಪುರ ಗ್ರಾಮದ ಜನರ ಸಹನೆಯ ಕಟ್ಟೆಯೂ ಒಡೆಯುತ್ತಿದ್ದು ಅರಣ್ಯ ಇಲಾಖೆ ಮೇಲೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹುಲಿಗೆ ವಯಸ್ಸಾಗಿಲ್ಲ ಪೆಟ್ಟು ಕೂಡ ಆಗದೇ ದಷ್ಟಪುಷ್ಟವಾಗಿದ್ದು ನರಭಕ್ಷಕನಲ್ಲ ಎಂಬ ಇಲಾಖೆಯ ವಾದದ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ವದಂತಿಗಳ ಸರಮಾಲೆ: ಕೆಬ್ಬೇಪುರ ಮತ್ತು ಚೌಡಹಳ್ಳಿಯ ನರಭಕ್ಷಕ ತಮ್ಮ ಊರಿಗೂ ಬಂದಿದೆ ಎಂಬ ಗುಲ್ಲು ಬೊಮ್ಮಲಾಪುರ, ಕೋಡಹಳ್ಳಿ, ಹುಂಡಿಮನೆ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದ್ದು ಅರಣ್ಯ ಇಲಾಖೆ ಅತ್ತ ಕಡೆ ಹುಲಿ ಚಲನವಲನ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಿಸಿ ಭೇಟಿ ಸಾಧ್ಯತೆ: ಕಳೆದ 4 ದಿನದ ಹಿಂದೆ ಹುಲಿದಾಳಿಯಿಂದ ಮೃತಪಟ್ಟ ಶಿವಲಿಂಗಪ್ಪ ಅವರ ಮನೆಗೆ ಇಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಅರಣ್ಯ ಇಲಾಖೆ ನಡೆಸುತ್ತಿರುವ ಹುಲಿ ಕಾರ್ಯಾಚರಣೆಯ ಮಾಹಿತಿಯನ್ನು ಅವರು ಪಡೆಯಲಿದ್ದು, ರೈತರ ಹುಲಿ ಭೀತಿಯ ಅಹವಾಲನ್ನು ಆಲಿಸಲಿದ್ದಾರೆ ಎಂದು ತಿಳಿದುಬಂದಿದೆ.