ಚಾಮರಾಜನಗರ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿದ್ದಾನೆ. ಜಿಲ್ಲೆಯ ಕೊಳ್ಳೇಗಾಲ ಸಮೀಪದ ಸುರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರವಿ ಎಂಬಾತ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ. ರವಿಯು ಅದೇ ಗ್ರಾಮದ ಟೆಲಿಫೋನ್ ಎಕ್ಸ್ಚೇಂಜ್ನಲ್ಲಿ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ. ಆದರೆ ಶುಕ್ರವಾರ ಆತನನ್ನು ಇದ್ದಕ್ಕಿಂದ್ದಂತೆ ನೌಕರಿಯಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
ಹಾಗೆಯೇ ತನ್ನ ಸಹೋದ್ಯೋಗಿ ಬಸವಣ್ಣ ಎಂಬಾತನಿಗೆ ರವಿಯು 50 ಸಾವಿರ ರೂಪಾಯಿ ಸಾಲ ನೀಡಿದ್ದನಂತೆ. ಆ ವ್ಯಕ್ತಿ ಸಾಲ ಹಿಂದಿರುಗಿಸದೇ ಸತಾಯಿಸಿದ್ದಾನೆ. ಈ ಎರಡು ಘಟನೆಗಳಿಂದ ಮನನೊಂದು ರವಿ ಟವರ್ ಏರಿದ್ದಾನೆ. ಇನ್ನು ವಿಷಯ ತಿಳಿದ ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ, ಸಾಲ ಹಿಂತಿರುಗಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಪತ್ನಿಯಿಂದ ಫೋನ್ ಮೂಲಕ ಮಾತನಾಡಿಸಿ ಮನವೊಲಿಸಿದ್ದಾರೆ. ಬಳಿಕ ಇನ್ನು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಆತನನ್ನು ಕೆಳಗಿಳಿಸಲಾಗಿದೆ.