ಚಾಮರಾಜನಗರ: ಶಾಲೆಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಗುರುವಾರ ನಾಲ್ಕು ಶಾಲೆಗಳಿಂದ ಐವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮೊರಾರ್ಜಿ ದೇಸಾಯಿ ಶಾಲೆ, ಅಕ್ಕಲಪುರ ಸ.ಹಿ.ಪ್ರಾ.ಶಾಲೆ, ಗುಂಡ್ಲುಪೇಟೆ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆ ಹಾಗೂ ಕೊಳ್ಳೇಗಾಲ ಶಾಲೆಗೆ ಸೇರಿದ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ನೋಡಲ್ ಅಧಿಕಾರಿ ಡಾ.ಮಹೇಶ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಬಳಿಕ ಕೊಡಗಾಪುರ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು. ಸದ್ಯ, ಜಿಲ್ಲೆಯ ಶಾಲೆಗಳಲ್ಲಿ ಕೊರೊನಾ ಆತಂಕ ಮುಂದುವರೆದಿದೆ.
ಲಸಿಕೆ ವಿತರಣೆಯಲ್ಲೂ ಹಿಂದೆ: ಇನ್ನು, ಲಸಿಕೆ ವಿತರಣೆಯಲ್ಲೂ ಚಾಮರಾಜನಗರ ಜಿಲ್ಲೆ ಹಿಂದೆ ಬಿದ್ದಿದ್ದು ರಾಜ್ಯದಲ್ಲಿ 27ನೇ ಸ್ಥಾನ ಪಡೆದಿದೆ. ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ.86ರಷ್ಟು ಪ್ರಗತಿಯಾಗಿದೆ. ಎರಡನೇ ಡೋಸ್ ಲಸಿಕೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಾಗಿದೆ. ಕೊಳ್ಳೇಗಾಲ ಹಾಗೂ ಹನೂರು ತಾಲೂಕುಗಳಲ್ಲಿ ಎರಡನೇ ಡೋಸ್ ಲಸಿಕೆ ನೀಡಿಕೆ ಪ್ರಮಾಣ ತೀರಾ ಕಡಿಮೆ ಇದೆ. ಈ ಸಂಬಂಧ ಡಿಸಿ ಚಾರುಲತಾ ಸೋಮಲ್ ಅವರು, ಲಸಿಕೆ ಪ್ರಯೋಜನ ಬಗ್ಗೆ ಮನವರಿಕೆ ಮಾಡಿಕೊಟ್ಟು, ಯಾವುದೇ ಸಬೂಬು ಹೇಳದೆ ಲಸಿಕೆ ವಿತರಣೆ ಹೆಚ್ಚಿಸಬೇಕು, ಪ್ರತಿದಿನ 20 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಿ ಎಂದು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 16 ಕೋವಿಡ್ ಕೇರ್ ಕೇಂದ್ರಗಳಿದ್ದು, ಎಲ್ಲಾ ಕೋವಿಡ್ ಕೇರ್ ಕೇಂದ್ರಗಳಿಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೋವಿಡ್ ಚಿಕಿತ್ಸೆಗಾಗಿ 2 ರಿಂದ 3 ತಿಂಗಳಿಗೆ ಅಗತ್ಯವಿರುವಷ್ಟು ಔಷಧ, ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳಬೇಕು. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬಾಕಿ ಇರುವ ಕೆಲಸ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಕೋವಿಡ್ ಕೇರ್ ಕೇಂದ್ರಗಳ ಸುಸ್ಥಿತಿ, ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದ್ದಾರೆ.
(ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್ ಪತ್ತೆ)