ಚಾಮರಾಜನಗರ: ಕೊರೊನಾ ಕರ್ಫ್ಯೂ ಜೊತೆಗೆ ಕೊರೊನಾ ಆತಂಕ ಜನರಲ್ಲಿ ಆವರಿಸಿದ್ದು, ಇಂದು ಬೆಳಗಿನ ವ್ಯಾಪಾರ ತೀರಾ ಡಲ್ಲೋ ಡಲ್ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗಿನಿಂದಲೇ ತೆರೆದಿದ್ದ ಮದ್ಯದಂಗಡಿಗಳ ಸ್ಥಿತಿಯೂ ಬೇರೆಯಾಗಿರಲಿಲ್ಲ.
ಬೆಳಗ್ಗೆ 6ರಿಂದಲೇ ವ್ಯಾಪಾರಕ್ಕೆ ತಯಾರಿ ಮಾಡಿಕೊಂಡಿದ್ದ ತರಕಾರಿ, ಹಣ್ಣು, ದಿನಸಿ ಅಂಗಡಿ ವ್ಯಾಪಾರಿಗಳಿಗೂ ಗ್ರಾಹಕರಿಲ್ಲದೆ ಪೆಚ್ಚು ಮೋರೆ ಹಾಕಿಕೊಂಡಿದ್ದರು. ಸತತ 4 ತಾಸು ಕಾದರೂ 200-300 ರೂ. ವ್ಯಾಪಾರವೂ ಆಗದಿದ್ದರಿಂದ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿದ್ದಾರೆ. ಕಳೆದ ವರ್ಷವೂ ಮಾವಿನ ಹಣ್ಣಿನ ವ್ಯಾಪಾರ ಕೈಗೆಟುಕಲಿಲ್ಲ. ಈ ವರ್ಷವೂ ಹಾಗೇ ಆಗುತ್ತದೆ ಎನಿಸುತ್ತದೆ ಎಂದು ಬೀದಿಬದಿ ವ್ಯಾಪಾರಿ ಸುಬ್ಬಮ್ಮ ಕಳವಳ ವ್ಯಕ್ತಪಡಿಸಿದರು.
ಯಾವ ಸಮಯದಲ್ಲಾದರೂ ಸರಿಯೇ ಮದ್ಯ ಕೊಳ್ಳಲು ಮುಗಿಬೀಳುತ್ತಿದ್ದ ಮದ್ಯಪ್ರಿಯರು ಇಂದು ಎಣ್ಣೆ ಅಂಗಡಿಗಳತ್ತ ಸುಳಿಯದಿದ್ದುದು ಮದ್ಯದಂಗಡಿ ಮಾಲೀಕರನ್ನು ಕಂಗಾಲು ಮಾಡಿದೆ. ನಿತ್ಯ ಸಾವಿರಾರು ರೂ. ಹಣ ನೋಡುತ್ತಿದ್ದ ಮಾಲೀಕರು ಇಂದು ನೂರಾರು ರೂ.ಗಷ್ಟೇ ತೃಪ್ತಿ ಪಡಬೇಕಿದ್ದು, ಬೆಳಗ್ಗೆ ಬದಲು ಸಂಜೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ.