ಬೆಂಗಳೂರು: ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಸಾರ್ವಜನಿಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ಸಾರಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಮಾತನಾಡಿ, ಮೈತ್ರಿ ಮೂಲಕವೇ ಮುಂದಿನ ಚುನಾವಣೆಗೆ ಪ್ರಚಾರ ಮಾಡುವ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಈ ಮಾತುಕತೆ ಆಗಿತ್ತು. ಉಪ ಚುನಾವಣೆಯಲ್ಲಿಯೂ ಕೂಡ ಒಟ್ಟಾಗಿ ಎದುರಿಸಿದ್ದೇವು. ಶಿವಮೊಗ್ಗದಲ್ಲಿ ಬಿಟ್ಟರೆ ಜಮಕಂಡಿ, ರಾಮನಗರ, ಬಳ್ಳಾರಿ, ಮಂಡ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದೇವು. ಶಿವಮೊಗ್ಗದಲ್ಲಿ ಕೇವಲ 50 ಮತಗಳ ಅಂತರದಿಂದ ಸೋತೆವು. ಈ ಸಾರಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವ ಗುರಿ ಹೊಂದಿದ್ದೇವೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ನಾವು ಮತ್ತೆ ಒಂದಾಗಿದ್ದೇವೆ ಎಂದರು.
ದೇವೇಗೌಡರು, ರಾಹುಲ್ ಗಾಂಧಿ ಉಪಸ್ಥಿತರಿರುವ ಒಂದು ಸಭೆ ಮಾ.31 ರಂದು ಬೆಂಗಳೂರಿನ ಸಮೀಪದಲ್ಲೇ ಎಲ್ಲಾದರು ಹಮ್ಮಿಕೊಳ್ಳುತ್ತೇವೆ. ರಾಹುಲ್ ಭೇಟಿಗೆ ಸಮಯ ಕೇಳಿದ್ದೇವೆ. ಸಿಗುವ ನಿರೀಕ್ಷೆ ಇದೆ. ಇದು ಐತಿಹಾಸಿಕ ಸಾರ್ವಜನಿಕ ಸಭೆ ಆಗಲಿದ್ದು, ಅಲ್ಲಿಯೇ ಚುನಾವಣಾ ರಣಕಹಳೆ ಮೊಳಗಲಿದೆ. ರಾಜ್ಯಕ್ಕೆ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಕ್ಕೂ ಸಂದೇಶ ನೀಡುತ್ತೇವೆ. 28 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಆಶಯ. ಎರಡೂ ಪಕ್ಷಗಳೂ ಒಟ್ಟಾಗಿ ಬಿಜೆಪಿಯನ್ನು ಮಣಿಸುವುದು ನಮ್ಮ ಏಕೈಕ ಗುರಿ ಎಂದು ವಿವರಿಸಿದರು.
ರಾಜ್ಯದಿಂದಲೇ ದೇಶಕ್ಕೆ ಉತ್ತಮ ಸಂದೇಶ:
ಸಿಎಂ ಎಚ್. ಡಿ ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಉತ್ತಮ ಆಡಳಿತ ಕೊಡುವ ಮೂಲಕ ಕರ್ನಾಕದಿಂದಲೇ ದೇಶಕ್ಕೆ ಉತ್ತಮ ಸಂದೇಶ ತಲುಪಲಿ ಎಂದು ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ಮತದಾರರನ್ನು ವಿಶ್ವಾಸಕ್ಕೆ ಪಡೆದು 28 ಕ್ಷೇತ್ರವನ್ನು ಗೆಲ್ಲುವ ಸವಾಲನ್ನು ಸ್ವೀಕರಿಸಿದ್ದೇವೆ. ದೇವೇಗೌಡರು, ಸಿದ್ದರಾಮಯ್ಯ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಎರಡೂ ಪಕ್ಷದ ನಾಯಕರು ಐತಿಹಾಸಿಕ ಚುನಾವಣಾ ಪ್ರಚಾರ ಸಭೆ ನಡೆಸಲು ತೀರ್ಮಾನಿಸಿದ್ದು, ದೇಶಕ್ಕೆ ಒಂದು ಸಂದೇಶ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಸಣ್ಣಪುಟ್ಟ ಗೊಂದಲ ನಿವಾರಿಸಿ ಕೊಳ್ಳುತ್ತೇವೆ:
ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಮಾತನಾಡಿ, ಈ ಪೂರ್ವಭಾವಿ ಚರ್ಚೆಯಲ್ಲಿ ಎಲ್ಲಾ ಸೇರಿ ಒಟ್ಟಾಗಿ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಕಾಲ ಕಡಿಮೆ ಇದೆ. ನಮಗೆ ವಿಂಗಡಣೆಯಾದ ಕ್ಷೇತ್ರಗಳಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ಮೊದಲ ಹಂತದ ಮತದಾನ ಆಗಲಿದೆ. ಆದ್ದರಿಂದ ಈ ಭಾಗದ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳುತ್ತೇವೆ. ನಾವು ನಾಯಕರ ಹಂತದಲ್ಲೇ ಸಮಾಲೋಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಜಿಲ್ಲಾ ನಾಯಕರು ಒಡಕಿನ ಮಾತು ಆಡಬಾರದು ಎಂದು ಸೂಚಿಸಿದ್ದೇವೆ. ಅಸಮಾಧಾನ ಇದ್ದರೆ ಅದನ್ನೂ ಬಗೆಹರಿಸಿಕೊಳ್ಳುತ್ತೇವೆ ಎಂದರು.
ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ನಾವು ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ರಾಹುಲ್ ಕೂಡ ಬರ್ತಾರೆ. ಅತ್ಯಂತ ವ್ಯವಸ್ಥಿತವಾಗಿ ಜನರನ್ನು ಹಾಗೂ ಕಾರ್ಯಕರ್ತರನ್ನು ತಲುಪುವ ಕಾರ್ಯವನ್ನು ಮಾಡಲಿದ್ದೇವೆ ಎಂದರು.