ಬಸವಕಲ್ಯಾಣ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಹುಲಸೂರ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಬೆಳೆ ಹಾನಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರಧನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಪಟ್ಟಣದ ವಾರ್ಡ್ ಸಂಖ್ಯೆ 1ರಲ್ಲಿ ಮಳೆ ನೀರಿನಿಂದ ಜನರಿಗೆ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ತಕ್ಷಣವೇ ಗ್ರಾಪಂ ಮತ್ತು ತಾಪಂನಿಂದ ನೀರು ಹರಿದು ಹೋಗಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ತಾಪಂ ಇಒಗೆ ಸೂಚಿಸಿದರು.
ಬೀದರ್-ಲಾತೂರ ರಸ್ತೆಯಲ್ಲಿನ ಸೇತುವೆ ತೀರಾ ಹಳೆಯದ್ದಾಗಿರುವ ಕಾರಣ ಸಂಪೂರ್ಣ ಕುಸಿದು ಹೋಗಿದೆ. ಸದ್ಯಕ್ಷೆ ವಾಹನ ಸಂಚಾರಕ್ಕಾಗಿ ಪರ್ಯಾಯ ಮಾರ್ಗವಾಗಿ ರಸ್ತೆ ನಿರ್ಮಿಸಲಾಗಿದೆ. ಬರುವ ದಿನದಲ್ಲಿ ಸೇತುವೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಮಳೆಗಾಲದ ನಂತರ ನೂತನ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಅಧಿಕ ಮಳೆಯಿಂದ ಹುಲಸೂರ ಪಟ್ಟಣ ಸಮೀಪದ ಮಚಳಂಬಿ ಕೆರೆ ಒಡೆದು ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ನೀರಿನಲ್ಲಿ ಕೊಚ್ಚಿ ಹೋದ ಸೋಯಾ, ತೊಗರಿ ಹೊತ್ತು ಕಬ್ಬು ಬೆಳೆಗಳ ವೀಕ್ಷಣೆ ಮಾಡಿದರು. ನಂತರ ಜಾಮಖಂಡಿ ಗ್ರಾಮದ ಬಳಿ ಕುಸಿದು ಬಿದ್ದ ಸೇತುವೆ ಹಾಗೂ ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಜಮೀನು ದಾನ ಮಾಡಲು ಮುಂದಾಗಿರುವ ದೇವೇಂದ್ರ ಬೊಪಳೆ ಹಾಗೂ ಪಂಡಿತರಾವ್ ಭೂಸರೆ ಅವರ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮನವಿ: ಮಳೆ ನೀರಿನಿಂದ ತೊಂದರೆಗೊಳಗಾದ ತಾಲುಕಿನ ಗೋರ್ಟಾ(ಬಿ) ಗ್ರಾಮದ ದಲಿತರ ಬಡಾವಣೆ ಸ್ಥಳಾಂತರಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು. ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತೀ ಎಕರೆಗೆ ಕನಿಷ್ಟ 25 ಸಾವಿರ ರೂ. ಪರಿಹಾರಧನ ಕಲ್ಪಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಅನಿಲ ಭುಸಾರೆ ಡಿಸಿಗೆ ಮನವಿ ಪತ್ರ ಸಲ್ಲಿಸಿದರು.