ಬಸವಕಲ್ಯಾಣ: ಯಾವುದೇ ಸ್ಥಳದಲ್ಲೂ ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ಸ್ಥಳದಲ್ಲೂ ಹೆಚ್ಚು ಜನ ಸೇರಿದರೆ ತಕ್ಷಣ ಅವರನ್ನು ಬಂಧಿಸಿ ಎಂದು ಶಾಸಕ ಬಿ.ನಾರಾಯಣರಾವ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾರಕ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಂಬಂಧ ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಕರೆದಿದ್ದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೊರೊನಾ ಸೋಂಕು ನಿಯಂತ್ರಣ ಮಾಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಇಟಲಿಯಂತಹ ರಾಷ್ಟ್ರಗಳೇ ಇಂದು ಯಾವ ಸ್ಥಿತಿಗೆ ತಲುಪಿವೆ ಎನ್ನುವುದನ್ನು ಗಮನಿಸಬೇಕಿದೆ. ನಮ್ಮಂತಹ ರಾಷ್ಟ್ರದಲ್ಲಿ ಇದು ವ್ಯಾಪಕವಾದಲ್ಲಿ ನಿಯಂತ್ರಣ ಕಷ್ಟವಾಗುತ್ತದೆ. ಕನಿಷ್ಠ 15 ದಿನಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಇದರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಮೊದಲು ನಾವು ನಂತರ ನಮ್ಮ ಮನೆಯವರು ಆಮೇಲೆ ನಮ್ಮ ಸಮಾಜದವರನ್ನು ರಕ್ಷಿಸುತ್ತೇವೆ ಎನ್ನುವ ತತ್ವ ಪಾಲಿಸಬೇಕು. ನಮ್ಮ ತಾಲೂಕಿನಲ್ಲಿ ಒಬ್ಬರಿಗೂ ಕೊರೊನಾ ಬಾರದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.