ಬೀದರ್: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೀದರ್ನ ರೇಕುಳಗಿ ಶಂಭುಲಿಂಗೇಶ್ವರನ್ನು ಹೆಚ್ಚು ನಂಬಿದ್ದರು. ಎಷ್ಟರ ಮಟ್ಟಿಗೆ ಅಂದರೆ ಯುಪಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಶ್ರೀ ಶಂಭುಲಿಂಗೇಶ್ವರ ಆಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು.
2012ರ ಜೂನ್ 28ರಂದು ಭಾರತದ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ 11 ಗಂಟೆಗೆ ನಾಮಪತ್ರ ಸಲ್ಲಿಸಿದರೆ, ಅದೇ ವೇಳೆಗೆ ಅವರ ಸೊಸೆ ಚಿತ್ರಲೇಖಾ ಹಾಗೂ ಮೊಮ್ಮಗ ಅರ್ಜುನ್ ಅವರು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿ-ವಿಧಾನಗಳು ನಡೆಸಿದ್ದರು. ಈ ವೇಳೆ ತಮಿಳನಾಡು ಮೂಲದ ಆಗಿನ ಸಂಸದ ಹಾರುಣ ರೋಷ್ ಹಾಗೂ ಆಗಿನ ಮೈಸೂರಿನ ಸಂಸದ ಹೆಚ್.ವಿಶ್ವನಾಥ್ ಅವರ ಕುಟುಂಬದ ಸದಸ್ಯರೊಂದಿಗೆ ಉಪಸ್ಥಿತರಿದ್ದರು.
ಪ್ರಣಬ್ ಮುಖರ್ಜಿ ಅವರು ಯಾವುದೇ ಹೊಸ ಕಾರ್ಯ ಮಾಡುವಾಗ ಶಂಭುಲಿಂಗೇಶ್ವರ ಆಶೀರ್ವಾದ ಪಡೆದೆ, ಮುಂದಿನ ಹೆಜ್ಜೆ ಹಾಕುತ್ತಿದ್ದರು. ಹೀಗಾಗಿ ಹಲವು ಬಾರಿ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರನ ಆಸ್ಥಾನಕ್ಕೆ ಯಾರಿಗೂ ಗೊತ್ತಾಗದೆ ಹಾಗೆ ಬಂದು ಹೋಗುತ್ತಿದ್ದರು.
ಪೂಜ್ಯ ಎನ್.ವಿ.ರೆಡ್ಡಿ ಅವರ ಮಾರ್ಗದರ್ಶನ: ಬೀದರ್ ಮೂಲದವರಾದ ಶಂಭುಲಿಂಗೇಶ್ವರ ದೇವಸ್ಥಾನದ ಪೂಜ್ಯ ಎನ್.ವಿ.ರೆಡ್ಡಿ ಅವರು ಪ್ರಣಬ್ ಮುಖರ್ಜಿ ಅವರ ಮನೆಯ ಬಹುತೇಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶದಂತೆ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು.