ಬೀದರ್: ಸಾಲಬಾಧೆ ತಾಳಲಾರದೇ ಇಬ್ಬರು ಗಂಡು ಮಕ್ಕಳ ಜೊತೆ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಲಂಜವಾಡದಲ್ಲಿ ನಡೆದಿದೆ. ವಿಕ್ರಂ ಜಾಲಿಂದರ್ ಬಿರಾದಾರ್ (36) ಮೃತ ರೈತ ಹಾಗೂ ಮಕ್ಕಳಾದ ಸಂಗಮೇಶ ವಿಕ್ರಂ(6), ಸುದರ್ಶನ್ ವಿಕ್ರಂ (8) ಮೃತರು. ತಮ್ಮ ಹೊಲದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರೈತ ವಿಕ್ರಂಗೆ ಲಕ್ಕನಗಾವ್ ಎಸ್.ಬಿ.ಐ ಬ್ಯಾಂಕಿನಲ್ಲಿ 50,000 ರೂ. ಖಾಸಗಿ ಸೇರಿದಂತೆ 6 ಲಕ್ಷ ರೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸುಮಾರು ಎರಡು ವರ್ಷಗಳಿಂದ ಈ ಸಾಲ ತೀರಿಸಲು ಪ್ರಯತ್ನಪಟ್ಟರೂ ಬಗೆಹರಿಯದಿದ್ದಾಗ ತಮ್ಮ ಮಕ್ಕಳನ್ನು ಕೂಡಾ ಕರೆದುಕೊಂಡು ಸ್ವಂತ ಹೊಲದಲ್ಲಿರುವ ಬಾವಿಗೆ ಹಾರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಇನ್ನೊಂದೆಡೆ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಎಂಬಲ್ಲಿ ನಡೆದಿದೆ. ತುಂಗಭದ್ರಾ ಎಲ್ಎಲ್ಸಿ ಕಾಲುವೆಗೆ ಲಕ್ಷ್ಮೀ ಎಂಬಾಕೆ ಇಬ್ಬರು ಮಕ್ಕಳೊಂದಿಗೆ ಹಾರಿದ್ದಾರೆ. ಈ ವೇಳೆ ಕುರಿ ಕಾಯುತ್ತಿದ್ದ ಆನಂದ್ ಹಾಗೂ ಮತ್ತಿತರರು ನಾಲ್ಕು ವರ್ಷದ ಮಗಳು ವೆನಿಲಾಳನ್ನು ರಕ್ಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಕ್ಷ್ಮೀ ಬಳ್ಳಾರಿ ತಾಲೂಕಿನ ಗುಗ್ಗರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದ ಕಾರಣಕ್ಕೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ. ಇವರಿಗೆ 16 ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಎಂಬವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಹುಟ್ಟಿಲ್ಲ, ಹೆಣ್ಣುಮಕ್ಕಳೇ ಜನಿಸಿದ್ದಾರೆ ಎಂಬ ಕಾರಣಕ್ಕೆ ಪ್ರತಿದಿನ ಪತಿ ವೀರಭದ್ರ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.
ಇದರಿಂದ ಬೇಸತ್ತು ಲಕ್ಷ್ಮೀ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಲುವೆ ಬಳಿ ಕುರಿ ಕಾಯುತ್ತಿದ್ದ ಆನಂದ ಮತ್ತು ಮತ್ತಿತರರು ಇವರನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ನಾಲ್ಕು ವರ್ಷದ ಮಗುವೊಂದನ್ನೇ ಅವರು ರಕ್ಷಿಸಲು ಸಾಧ್ಯವಾಗಿದೆ.
ಈ ಘಟನೆ ಕುರಿತು ಸ್ಥಳೀಯರು ಮೋಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಕ್ಷ್ಮೀ ಮತ್ತು ಶಾಂತಿಯ ದೇಹಕ್ಕಾಗಿ ಹುಡುಕಾಟ ಕಾರ್ಯ ನಡೆಸುತ್ತಿದ್ದಾರೆ. ಲಕ್ಷ್ಮೀ ಮತ್ತು ಆಕೆಯ ಎರಡು ವರ್ಷದ ಮಗು ಪತ್ತೆಯಾಗಿಲ್ಲ. ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಕೊಲೆ ಮಾಡಿ ತಾಯಿ ಆತ್ಮಹತ್ಯೆ: ಇನ್ನು ಮಗದೊಂದು ಇಂತಹುದೇ ಪ್ರಕರಣ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಿಂದ ವರದಿಯಾಗಿತ್ತು. ರೈತ ಅರ್ಜುನ್ ಮತ್ತು ರೇಖಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಹ ಸಣ್ಣಪುಟ್ಟ ಕಲಹ ಹೊಂದಿದ್ದರು ಎನ್ನಲಾಗಿದೆ. ಆದರೂ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಎಂದಿನಂತೆ ಅರ್ಜುನ್ ಕಬ್ಬು ಕಟಾವು ಮಾಡುವುದಕ್ಕೆ ಹೊಲಕ್ಕೆ ತೆರಳಿದ್ದಾರೆ.
ರೇಖಾ ಇತ್ತೀಚೆಗೆ ಕೆಲ ವಿಚಾರಗಳಿಗಾಗಿ ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗುತ್ತಿತ್ತು. ರೇಖಾ ಪ್ರತಿದಿನ ಮಕ್ಕಳ ಓದು, ಪಾಲನೆ ಪೋಷಣೆ ಕುರಿತು ಹೆಚ್ಚಾಗಿ ಚಿಂತಿಸುತ್ತಿದ್ದರಂತೆ. ಇದರ ಬಗ್ಗೆ ಬಹಳ ಆಲೋಚಿಸಿದ ರೇಖಾ ಕೊನೆಗೆ ಮಕ್ಕಳನ್ನು ಕೊಲೆಗೈದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಓದಿ : ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ: ಕುರಿಗಾಹಿ ನೆರವಿಂದ ಮಗು ರಕ್ಷಣೆ, ಇಬ್ಬರು ನಾಪತ್ತೆ