ಬೀದರ್: ಶ್ರಮಜೀವಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಸುಪ್ರಿಯಾ ರಾಠೋಡ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಪಶುಸಂಗೋಪನಾ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ ಅವರು ಡಿವೈಎಸ್ಪಿ ಬಸವರಾಜ ಹೀರಾ ಅವರಿಗೆ ಸೂಚಿಸಿದರು.
ಔರಾದ್ ತಾಲೂಕಿನ ನರಸಿಂಹಪೂರ್ ತಾಂಡದಲ್ಲಿ ಸಾವಿಗೀಡಾದ ಸುಪ್ರಿಯಾ ಅವರ ಮನೆಗೆ ಸಚಿವ ಪ್ರಭು ಚೌಹಾಣ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಸ್ಥಳದಲ್ಲೇ ದೂರವಾಣಿ ಮೂಲಕ ಮಾತನಾಡಿ, ವಿದ್ಯಾರ್ಥಿನಿ ಸಾವಿನ ಕುರಿತು ಸಾರ್ವಜನಿಕವಾಗಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಹೋರಾಟ ಮಾಡಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಡಿವೈಎಸ್ಪಿ ಅವರಿಗೆ ಸೂಚಿಸಿದರು.
ಮೃತ ವಿದ್ಯಾರ್ಥಿ ಕುಟುಂಬಕ್ಕೆ ಧೈರ್ಯ ಹೇಳಿದ ಸಚಿವರು ನಾನು ನಿಮ್ಮೊಂದಿಗೆ ಇದ್ದೇನೆ. ನಿಮ್ಮ ನೋವು ಸರ್ಕಾರಕ್ಕೆ ಅರ್ಥವಾಗುತ್ತೆ. ಯಾವ ಕಾರಣಕ್ಕಾಗಿ ನಿಮ್ಮ ಮಗಳ ಸಾವಾಗಿದೆ ಎಂಬುದು ಹೊರ ಬರಲಿದೆ ಎಂದು ಭರವಸೆ ನೀಡಿದರು.