ಬಸವಕಲ್ಯಾಣ: ಚಲಿಸುತ್ತಿದ್ದ ಟಾಟಾ ಸಫಾರಿ ವಾಹನದ ಟೈಯರ್ ಸ್ಪೋಟಗೊಂಡು ಬೆಂಕಿ ತಗುಲಿ ವಾಹನ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಹೋಗಿರುವ ಘಟನೆ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಸಮೀಪ ನಡೆದಿದೆ.
ಹಲಸೂರಿನಿಂದ ಬಸವಕಲ್ಯಾಣ ಮಾರ್ಗವಾಗಿ ಕಲಬುರಗಿಗೆ ತೆರಳುವಾಗ ಮಾರ್ಗ ಮಧ್ಯೆ ಗಡಿಗೌಂಡಗಾಂವ ಬಳಿ ಟಾಟಾ ಸಫಾರಿ ವಾಹನದ ಟೈಯರ್ ಸ್ಫೋಟಗೊಂಡು ವಾಹನ ಮರಕ್ಕೆ ಡಿಕ್ಕಿ ಹೊಡೆದಿದ್ದು, ನಂತರ ಡಿಕ್ಕಿಯ ರಭಸದಿಂದಾಗಿ ವಾಹನದಲ್ಲಿಯ ವೈಯರ್ಗಳು ಸುಟ್ಟು ವಾಹನಕ್ಕೆ ಬೆಂಕಿ ತಗುಲಿದೆ. ಮರಕ್ಕೆ ವಾಹನ ಡಿಕ್ಕಿ ಹೊಡೆಯುತ್ತಿದ್ದಂತೆ ವಾಹನದ ಚಾಲಕ ಸಿದ್ಧಾರೂಡ ಎಂಬಾತ ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ವಾಹನ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಪಿಎಸ್ಐ ಗೌತಮ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.