ಬಳ್ಳಾರಿ: ಗಣಿನಾಡಿನಲ್ಲಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ವಿದ್ಯಾರ್ಥಿವೋರ್ವ ಸಾವನ್ನಪ್ಪಿದ್ದಾನೆ. ಬಿರುಗಾಳಿಗೆ ಮರ ಧರೆಗುರುಳಿದ ಪರಿಣಾಮ ಕಾರು ಜಖಂಗೊಂಡಿದೆ.
ಇಲ್ಲಿನ ಗೌತಮ್ ನಗರದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ವೆಂಕಟೇಶ (21) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗೋಸಬಾಳು ಗ್ರಾಮದ ಯುವಕ ವೆಂಕಟೇಶ ಇಲ್ಲಿನ ಗುರು ತಿಪ್ಪೇರುದ್ರ ಕಾಲೇಜಿನಲ್ಲಿ (ಎಸ್ಜಿಟಿ) ಬಿ.ಕಾಂ ಪದವಿಯ ದ್ವಿತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಸಂಜೆಯೊತ್ತಿಗೆ ಬಿರುಗಾಳಿ, ಸಿಡಿಲು, ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದು, ಈ ವೇಳೆ ವಿದ್ಯಾರ್ಥಿ ನಿಲಯದ ಸಮೀಪ ಕ್ರಿಕೆಟ್ ಆಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟರು ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.