ಬಳ್ಳಾರಿ: ಪತ್ರಕರ್ತನಲ್ಲಿ ಅಕ್ಷರಜ್ಞಾನದ ಜೊತೆಗೆ ಹೋರಾಟದ ಕಿಚ್ಚು ಇರಬೇಕು ಎಂದು ಹಿರಿಯ ಪತ್ರಕರ್ತ ಬಿ.ಸಮೀವುಲ್ಲಾ ಹೇಳಿದರು.
ಇಲ್ಲಿನ ಡಿಸಿ ಕಚೇರಿಯ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬಳ್ಳಾರಿ ಪತ್ರಕರ್ತರ ಬಳಗದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸ್ತುತ ದಿನಗಳಲ್ಲಿ ಮಾಧ್ಯಮದ ಸ್ಥಿತಿ-ಗತಿ ಕುರಿತ ವಿಶೇಷ ಉಪನ್ಯಾಸ ನೀಡಿದರು.
ಹೊಸ ತಲೆಮಾರಿನ ಪತ್ರಕರ್ತರು ಪರಂಪರೆಯ ಪ್ರಜ್ಞೆಯನ್ನು ಮೊದಲು ಮೈಗೂಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಡಿಜಿಟಲ್ ಮಾಧ್ಯಮದ ಶ್ರೇಯೋಭಿವೃದ್ಧಿಗೆ ಭಾರೀ ಪ್ರಮಾಣದ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಾಗಬಹುದು ಎಂದರು.
ಸೂತ್ರ ಬದ್ಧ ಕಮರ್ಷಿಯಲ್ ಸಿನಿಮಾ ಮಾದರಿಯಲ್ಲೇ ಈ ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಪ್ರಸ್ತುತ ದಿನಮಾನಗಳಲ್ಲಿ ಸ್ಪರ್ಧೆಗೆ ಬಿದ್ದಿರುವ ಅವುಗಳು ಕೇವಲ ಮಾರಾಟದ ಸರಕಾಗಿ ಬದಲಾಗುತ್ತಿವೆ. ಆಗಾಗಿ, ದೃಶ್ಯ ಮಾಧ್ಯಮವು ಎಷ್ಟರಮಟ್ಟಿಗೆ ಸಾಮಾಜಿಕ ಬದ್ಧತೆಯನ್ನು ಕಾಪಾಡುತ್ತದೆ ಎಂಬ ಅನುಮಾನ ನಮಗೆ ಮೂಡುತ್ತದೆ ಎಂದರು.
ಟಿಆರ್ ಪಿ ಹಾಗೂ ದಿನಪ್ರತಿಕೆಗಳನ್ನು ಹೆಚ್ಚಿಸುವಂತಹ ಕಾರ್ಯಕ್ಕೆ ಪತ್ರಿಕೋದ್ಯಮ ಮುಂದಾಗಿದೆ. ಆದರೆ, ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಆಲೋಚನೆ ಮಾಡುವಂತಹ ಶಕ್ತಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವಿಷಾದಿಸಿದರು.
ಪತ್ರಕರ್ತರ ತಲೆಮೇಲೆ ಕೋಡು ಮೂಡಿರಲ್ಲ: ಪತ್ರಕರ್ತರ ತಲೆಮೇಲೆ ಕೋಡು ಮೂಡಿರುವುದಿಲ್ಲ. ನಾವೂ ಕೂಡ ಮನುಷ್ಯರೇ. ನಾವೆಲ್ಲ ಹಳ್ಳಿಗಾಡಿನಿಂದ ಬಂದಂತಹ ಪತ್ರಕರ್ತರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹೋಸರಾಟಗಾರರ ಕಿಚ್ಚು, ಗಂಡೆದೆಯ ಕುರಿತ ಅರಿತುಕೊಂಡೇ ಅವರ ಪರವಾಗಿ ಬರವಣಿಗೆ ಬರೆಯುತ್ತೇವೆ. ಅಂತಹ ಕೆಚ್ಚೆದೆ ಇಂದಿನ ಹೊಸ ತಲೆಮಾರಿನ ಪತ್ರಕರ್ತರಲ್ಲಿ ಇಲ್ಲ ಎಂಬುದು ನನಗೆ ಅತ್ಯಂತ ನೋವಿನ ಸಂಗತಿ ಎಂದರು.
ಪತ್ರಿಕೆಗಳು ಗಾಂಧೀಜಿಯವರನ್ನು ಕೊಂದ ತತ್ವ ಸಿದ್ದಾಂತವನ್ನು ಮುಖ್ಯವಾಹಿನಿಗೆ ತಂದವು. ಆದರೆ, ಅದನ್ನು ವಿರೋಧಿಸಿದ ಧ್ವನಿ ಮಾಧ್ಯಮಗಳಲ್ಲಿ ಕೇಳಿ ಬರಲಿಲ್ಲ. ಗೋಡ್ಸೆ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವುದು ಖಂಡನೀಯ. ಅಂತಹ ದಿನ ಪತ್ರಿಕೆಗಳು ನಮಗೆ ಬೇಡ. ಪತ್ರಿಕೆಗಳು ಸಾಮಾಜಿಕ ಬದ್ಧತೆಯ ಮಾಧ್ಯಮವಾಗದೇ, ಉದ್ಯಮವಾಗಿ ಉಳಿಯುತ್ತದೆ. ವ್ಯಾಪಾರೀಕರಣ ಮತ್ತು ವಿಜೃಂಭೀಕರಣ ಹೆಚ್ಚಾದಾಗ ಮನುಷ್ಯತ್ವ ನಾಶವಾಗಿ ಸುದ್ದಿ ಸರಕಾಗಿ ಬಿಡುತ್ತದೆ. ಸುದ್ದಿ ಮಾರಾಟದ ಸರಕಾದಾಗ ಓದುಗ ಗ್ರಾಹಕನಾಗುತ್ತಾನೆ ಎಂದು ಇಂದಿನ ಪ್ರತಿಕೋದ್ಯಮದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.