ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ಹಗರಿ ನದಿ ದಡದ ಪ್ರದೇಶದಲ್ಲಿ ಮಿಡತೆಗಳು ಕಂಡುಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ವಿಜ್ಞಾನಿ, ಕೃಷಿ ನಿರ್ದೇಶಕ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ.ಆನಂದ ಕುಮಾರ್, ಇವು ಆಫ್ರಿಕಾದ ಮರುಭೂಮಿಯಿಂದ ಬಂದವುಗಳಲ್ಲ, ಸ್ಥಳೀಯ ಮಿಡತೆಗಳು ಎಂದು ಸ್ಪಷ್ಟಪಡಿಸಿದರು.
ಈ ಪ್ರದೇಶದಲ್ಲಿ ತಂಪು ವಾತಾವರಣ ಇದ್ದು ಸಂತಾನೋತ್ಪತ್ತಿಗಾಗಿ ಬಂದಿರುವುದರಿಂದ ಗುಂಪು ಗುಂಪಾಗಿ ಕಾಣುತ್ತಿವೆ, ಇವುಗಳು ಬಳ್ಳಾರಿ ಜಾಲಿ ಗಿಡದಲ್ಲಿನ ಎಲೆಗಳನ್ನು ಮಾತ್ರ ತಿನ್ನುತ್ತವೆ, ರೈತರ ಬೆಳೆಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಅವರು ವಿವರಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಲ್ಲಿಕಾರ್ಜುನ ಮಾತನಾಡಿ, ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಮಿಡತೆಗಳು ಕಂಡುಬಂದಿವೆ. ಕೀಟದ ಮಾದರಿಯನ್ನು ವಿಜ್ಞಾನಿಗಳು ಹೆಚ್ಚಿನ ಮಾಹಿತಿಗಾಗಿ ಸಂಗ್ರಹಿಸಿದ್ದು, ಕೃಷಿ ವಿಜ್ಞಾನಿಗಳ ಸೂಚನೆಯಂತೆ ಅಗತ್ಯ ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.