ಬಳ್ಳಾರಿ: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಹಿರೇಹಡ್ಲಿಗಿ ಗ್ರಾಮದ ಜನರು ಕಳೆದ ಹತ್ತು ವರ್ಷಗಳಿಂದ ಗ್ರಾಮದ ಪಕ್ಕದಲ್ಲಿರುವ ಕೆರೆ ನೀರನ್ನು ಕುಡಿಯುತ್ತಿದ್ದರು. ಆದ್ರೆ ಕಳೆದ ನಾಲ್ಕು ತಿಂಗಳ ಹಿಂದೆ ಕೆರೆಯ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು ಸೇವಿಸಲು ಯೋಗ್ಯವಾಗಿಲ್ಲ. ಹೀಗಾಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಭಾರಿ ತೊಂದರೆ ಉಂಟಾಗಿದೆ. ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇದೆ. ಆದ್ರೆ ಅದು ಕೆಟ್ಟು ಹೋಗಿದ್ದು ನೀರಿಗೆ ಹಾಹಾಕಾರ ಶುರುವಾಗಿದೆ.
ಗ್ರಾಮದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಜನರಿದ್ದಾರೆ. ಹೀಗಿದ್ದರೂ ಕೇವಲ ಎರಡು ಟ್ಯಾಂಕರ್ನಲ್ಲಿ ನೀರು ಬಿಡಲಾಗುತ್ತಿದೆ. ಟ್ಯಾಂಕರ್ ಬಂದ ತಕ್ಷಣ ಜನರು ಬಿಂದಿಗೆ ಹಿಡಿದು ಮುಗಿಬೀಳುವ ಪರಿಸ್ಥಿತಿಯಿದೆ. ಬೆಳಗಾದರೆ ಕೆಲಸದ ಚಿಂತೆಗಿಂತ ಇಲ್ಲಿನ ಜೀವಜಲ ಸಂಗ್ರಹವೇ ದೊಡ್ಡ ಸವಾಲಾಗಿದೆ.