ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಅದು ನನ್ನ ನಿರ್ಧಾರವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿಂದು ಆಯೋಜಿಸಿದ್ದ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ನನ್ನ ಬಗ್ಗೆ ಅನ್ಯತಾ ಭಾವಿಸಬಾರದು. ಆವತ್ತಿನ ಸಚಿವ ಸಂಪುಟದ ಸಭೆಯಲ್ಲಿ ಏನೇನು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದನ್ನ ಮಾಧ್ಯಮಗಳಿಗೆ ತಿಳಿಸುವ ಅಧಿಕಾರ ನನಗೆ ಕೊಟ್ಟಿರೋದರಿಂದ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಧಾರವನ್ನ ಹೇಳಿರುವೆ ಅಷ್ಟೇ. ಅದರಲ್ಲೇನು ನನ್ನ ಸ್ವಾರ್ಥ ಇಲ್ಲ ಎಂದಿದ್ದಾರೆ.
ವಾಸ್ತವವಾಗಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಬೇಕೋ ಬೇಡವೋ ಅಥವಾ ಈ ನಿರ್ಧಾರ ಸರಿಯೋ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ಅಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸಾರ್ವಜನಿಕವಾಗಿ ತಿಳಿಸುವ ನನ್ನ ಜವಾಬ್ದಾರಿಯನ್ನಷ್ಟೇ ನಾನು ಮಾಡಿದ್ದೇನೆಂದು ಸಚಿವ ಮಾಧುಸ್ವಾಮಿ ಹೇಳಿದರು. ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿಯವರು ಯಾಕೆ ಹಿಂಗೆ ಮಾತನಾಡಿದ್ದಾರೆ ಎಂದು ನನಗಂತೂ ಗೊತ್ತಿಲ್ಲ ಎಂದರು.