ಬಳ್ಳಾರಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಇ- ಆಫೀಸ್ ಅನುಷ್ಠಾನಗೊಂಡಿದ್ದು, ಕಡತಗಳ ವಿಳಂಬಕ್ಕೆ ಅಸ್ಪದವಿಲ್ಲದೇ ಶೀಘ್ರವಾಗಿ ವಿಲೇವಾರಿಯಾಗುತ್ತಿವೆ.
ಕಚೇರಿಯಲ್ಲಿ ತ್ವರಿತಗತಿಯಲ್ಲಿ ಕಡತಗಳ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಾಗಿಯೇ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಬೆಸ್ಟ್ ಎಂಪ್ಲಾಯಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಪ್ರತಿ ತಿಂಗಳು ತಮ್ಮ ವ್ಯಾಪ್ತಿಗೆ ಬರುವ ಅರ್ಜಿಗಳು, ನಿಗದಿಪಡಿಸಿದ ಅವಧಿಯೊಳಗೆ ಕಡತಗಳ ವಿಲೇವಾರಿ ಮೂಲಕ ಸ್ಪಂದನೆ, ಇ-ಹಾಜರಾತಿ ಪ್ರಗತಿಯನ್ನು ಪರಿಶೀಲಿಸಿ ಮೂರು ಮಂದಿ ನೌಕರರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.
2019ರ ಸೆಪ್ಟಂಬರ್ ತಿಂಗಳ ಪ್ರಶಸ್ತಿಗೆ ಡಿಸಿ ಕಚೇರಿಯ ಕೆ.ಸುಧಾ, ಮಂಜುಳಾ ನಂದಿಕೋಲಮಠ, ಎಂ. ಹಸೀನಾಬಾನು ಅವರು ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಜಿಲ್ಲಾಧಿಕಾರಿ ನಕುಲ್ ಅವರು ಸೋಮವಾರ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.
ಈ ಬೆಸ್ಟ್ ಎಂಪ್ಲಾಯಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಡಿಸಿ ನಕುಲ್ ಅವರು, ಡಿಸಿ ಕಚೇರಿಯ ಎಲ್ಲ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಕಚೇರಿಗೆ ಸಮಸ್ಯೆ ಹೊತ್ತು ಬರುವವರೆಗೆ ಸಿಬ್ಬಂದಿ ಸಕಾಲದಲ್ಲಿ ಸ್ಪಂದಿಸುವಂತೆ ಸೂಚಿಸಿದರು.