ಬಳ್ಳಾರಿ : ನಗರದ ಮೋತಿ ವೃತ್ತದ ರೈಲ್ವೆ ಸೇತುವೆ ಅಗಲೀಕರಣ ಸೇರಿದಂತೆ ನಗರದ ಪ್ರಮುಖ ರೈಲ್ವೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರ ನೇತೃತ್ವದ ನಿಯೋಗವು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ ಬೆಳಗಾವಿಯಲ್ಲಿ ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಆದ್ಯತೆ ಮೇರೆಗೆ ಈ ರೈಲ್ವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರು ಸಚಿವರಲ್ಲಿ ಕೋರಿದರು.
ಮೋತಿ ವೃತ್ತದ ಬಳಿಯ ರೈಲ್ವೆ ಬ್ರಿಡ್ಜ್ ನಿರ್ಮಾಣಗೊಂಡು ಸುಮಾರು 65 ವರ್ಷಗಳಷ್ಟು ಹಳೆಯದಾಗಿರುತ್ತದೆ. ಈ ಬ್ರಿಡ್ಜ್ನ ಎರಡು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಿಂದ ಚತುಷ್ಪಥ ರಸ್ತೆ ನಿರ್ಮಾಣವಾಗಿರುತ್ತದೆ. ಪ್ರಸ್ತುತ ನಗರವು ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಾರಣ ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ವಾಹನ ಸವಾರರಿಗೆ ತುಂಬಾ ಅನಾನುಕೂಲವಾಗುತ್ತಿದೆ. ಆದುದರಿಂದ ಮೋತಿ ವೃತ್ತದ ರೈಲ್ವೆ ಬ್ರಿಡ್ಜ್ ಅಗಲೀಕರಣ ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಅಂಗಡಿ ಅವರಲ್ಲಿ ಕೇಳಿಕೊಂಡರು.
ಸುಧಾ ಕ್ರಾಸ್ನಲ್ಲಿ ಬರುವ ರೈಲ್ವೆ ಪ್ಲೆ ಒವರ್ ನಿರ್ಮಿಸಿ:
ಸುಧಾ ಕ್ರಾಸ್ನಲ್ಲಿ ಬರುವ ರೈಲ್ವೆ ಪ್ಲೆ ಒವರ್ ನಿರ್ಮಿಸಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಸಂಸದ ವೈ.ದೇವೇಂದ್ರಪ್ಪ ಅವರ ನೇತೃತ್ವದ ತಂಡವು ಮನವಿ ಮಾಡಿತು. ಈ ಪ್ರದೇಶವು ಹೊಸಪೇಟೆಯಿಂದ ನಗರದ ಟಿ.ಬಿ.ಸ್ಯಾನಿಟೋರಿಯಂ, ಒಪಿಡಿ ಆಸ್ಪತ್ರೆ, ಬೆಳಗಲ್ಲು ಕ್ರಾಸ್, ಕಂಟೋನ್ಮೆಂಟ್ ಹಾಗೂ ರೇಡಿಯೋ ಪಾರ್ಕ್ನಲ್ಲಿನ ವಸತಿ ಜನಸಂದಣಿಯಿಂದ ಬರುವ ವಾಹನಗಳು ಹಾಲಿಯಿರುವ ಸುಧಾ ಕ್ರಾಸ್ ರೈಲ್ವೆ ಗೇಟ್ ಮುಖಾಂತರ ನಗರಕ್ಕೆ ಪ್ರವೇಶ ಪಡೆಯುತ್ತಿದ್ದು, ಸುಧಾ ಕ್ರಾಸಿನಲ್ಲಿರುವ ರೈಲ್ವೆ ಗೇಟ್ಅನ್ನು ಮುಚ್ಚುವುದರಿಂದ ವಾಹನದಟ್ಟನೆ ಆಗುತ್ತದೆ. ಅಲ್ಲದೆ ಸದರಿ ಪ್ರದೇಶದಲ್ಲಿ ಹಲವಾರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿದ್ದು ಸದರಿ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ಅನಾನುಕೂಲ ಆಗುತ್ತಿರುತ್ತದೆ. ಆದರಿಂದ ಸದರಿ ರೈಲ್ವೆ ಹಳಿ ಮೇಲ್ಭಾಗದಲ್ಲಿ ರೈಲ್ವೆ ಫ್ಲೈಓವರ್ ನಿರ್ಮಿಸುವುದು ಸೂಕ್ತ ಎಂಬುದನ್ನು ರೈಲ್ವೆ ಸಚಿವರಿಗೆ ವಿವರಿಸಿದರು.
ರಂಗಮಂದಿರ ಹತ್ತಿರವಿರುವ ಹಾಲಿ ರೈಲ್ವೆ ವೆಂಟ್ ಅನ್ನು ಎತ್ತರಿಸಿ:
ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಹತ್ತಿರವಿರುವ ರೈಲ್ವೆ ವೆಂಟ್ಅನ್ನು ಎತ್ತರಿಸಬೇಕು ಎಂದು ಕೋರಿದರು. ಬೆಂಗಳೂರು-ಬಳ್ಳಾರಿ ಮುಖ್ಯರಸ್ತೆಯಿಂದ ಖಾಸಗಿ ಬಸ್ ತಂಗುದಾಣ, ಮಹಾನಗರ ಪಾಲಿಕೆಯ ಘನತಾಜ್ಯ ವಿಂಗಡಣಾ ಘಟಕ, ರೇಡಿಯೋ ಪಾರ್ಕ್ ಮತ್ತು ಹೊಸಪೇಟೆ ನಗರಕ್ಕೆ ಪ್ರಮುಖ ರಸ್ತೆಯಾಗಿದ್ದು ಈ ರಸ್ತೆಯಲ್ಲಿನ ಹಾಲಿ ಇರುವ ಎರಡು ರೈಲ್ವೆ ವೆಂಟ್ಗಳಲ್ಲಿ ಒಂದು ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ, ಅಲ್ಲದೆ ಮತ್ತೊಂದು ರೈಲ್ವೆ ವೆಂಟ್ನಲ್ಲಿ ಮಳೆಗಾಲದಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಆಡಚಣೆ ಉಂಟಾಗುತ್ತದೆ. ಆದುದರಿಂದ ಹಾಲಿ ಎತ್ತರ ಕಡಿಮೆ ಇರುವ ರೈಲ್ವೆ ವೆಂಟ್ ಅನ್ನು ಸೂಕ್ತವಾಗಿ ಎತ್ತರಿಸಿದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರಕ್ಕೆ ಯೋಗ್ಯವಾಗಲಿದೆ ಎಂದು ವಿವರಿಸಿದರು.
ಅನಂತಪುರ ರಸ್ತೆಯಿಂದ ಸಂಗನಕಲ್ಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿನ ರೈಲ್ವೆ ಹಳಿಗೆ ಅಂಡರ್ ಬ್ರಿಡ್ಜ್ ನಿರ್ಮಿಸುವುದು ಸೇರಿದಂತೆ ಹಲವು ಪ್ರಮುಖ ರೈಲ್ವೆ ಕಾಮಗಾರಿಗಳನ್ನು ಹಾಗೂ ಇನ್ನಿತರ ರೈಲ್ವೆ ಕಾಮಗಾರಿಗಳನ್ನು ನಗರದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಮುಖವೆಂದು ಪರಿಗಣಿಸಬೇಕು ಎಂದು ಸಚಿವ ಸುರೇಶ ಅಂಗಡಿ ಅವರಲ್ಲಿ ಕೋರಿದರು.
ಈ ಸಮಯದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಘೂಳಪ್ಪ ಬಿ.ಹೊಸಮನಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ, ರೈಲ್ವೆ ಎಂಜಿನಿಯರ್ ಸೋಮಶೇಖರ್ ಹಾಗೂ ಬುಡಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್, ಮುಖಂಡರಾದ ರಾಜು ಚಿಕ್ಕನಗೌಡ, ವಿಜಯ ಪಾಟೀಲ್ ಉಪಸ್ಥಿತರಿದ್ದರು.