ಬಳ್ಳಾರಿ: ಕಲಬುರಗಿಯ ವಿಮಾನ ನಿಲ್ದಾಣದ ಬಳಿಯಿದ್ದ ಸೇವಾಲಾಲ್ - ಮರಿಯಮ್ಮದೇವಿ ಮಂದಿರ ಧ್ವಂಸಗೊಳಿಸಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರನ್ನ ನಾಮಕರಣ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಬಂಜಾರ ಸಮುದಾಯದವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಇದಕ್ಕೂ ಮುನ್ನ ಇಲ್ಲಿನ ಬೆಳಗಲ್ ಕ್ರಾಸ್ನಿಂದ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಜಾರ ಸಮುದಾಯದ ಬಡಜನರು 750 ಎಕರೆ ಜಮೀನು ನೀಡಿದ್ದು, ಮನೆ ಮತ್ತು ಕೃಷಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಭೂಮಿಯನ್ನು ಅತಿ ಕಡಿಮೆ ದರದಲ್ಲಿ ಖರೀದಿ ಮಾಡಿದ್ದು, ಆಗಿನ ಜಿಲ್ಲಾಧಿಕಾರಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರು ನಾಮಕರಣ ಮಾಡುವುದಾಗಿ ಹೇಳಿ, ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ನಿಲ್ದಾಣದಲ್ಲಿದ್ದ ಮಂದಿರವನ್ನು ಧ್ವಂಸಗೊಳಿಸಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಂದ್ರನಾಯ್ಕ ಆರೋಪಿಸಿದ್ದಾರೆ.
ಮಂದಿರ ಧ್ವಂಸಗೊಳಿಸಿದ ಅಧಿಕಾರಿಗಳು ಮತ್ತು ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಶಿಕ್ಷಿಸಬೇಕು. ಜೊತೆಗೆ ಅದೇ ಸ್ಥಳದಲ್ಲಿ ಸೇವಾಲಾಲ್-ಮರಿಯಮ್ಮ ಮಂದಿರ ನಿರ್ಮಾಣ ಮಾಡಿ, ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ರಾಜ್ಯ ಸರ್ಕಾರ ಈ ಕುರಿತು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.